ಹೊಸದಿಗಂತ ವರದಿ ಮಡಿಕೇರಿ:
ಭಾರತದ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಅವರು ಒತ್ತಾಯಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಪರಿಷತ್ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಸಭಾಪತಿಗಳಿಗೆ ಮನವಿ ಸಲ್ಲಿಸಿದ ಅವರು ಕೊಡಗಿಗೆ ಸಂಬಂಧಿಸಿದ ನಾಲ್ಕು ಪ್ರಮುಖ ಬೇಡಿಕೆಗಳ ಬಗ್ಗೆ ಗಮನಸೆಳೆದರು.
ತಲಕಾವೇರಿಯ ಪವಿತ್ರ ತೀರ್ಥೋದ್ಭವದ ದಿನ ರಾಜ್ಯ ವ್ಯಾಪಿ ಸಾರ್ವತ್ರಿಕ ರಜೆ ಘೋಷಿಸುವುದರೊಂದಿಗೆ ಕಾವೇರಿ ನೀರು ಹರಿಯುವ ರಾಜ್ಯದ ಪ್ರತೀ ಗ್ರಾಮಗಳಲ್ಲಿಯೂ ಕಾವೇರಿ ಆರತಿಯನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳುವಂತೆಯೂ ತೇಜಸ್ವಿನಿ ಅವರು ಮನವಿ ಮಾಡಿದರು.
ಕೆಲವು ದಿನಗಳ ಹಿಂದೆ ಕೊಡಗಿಗೆ ಆಗಮಿಸಿದ್ದ ತೇಜಸ್ವಿನಿ ಗೌಡ ಅವರಿಗೆ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಈ ಸಂಬಂಧ ಮನವಿ ಮಾಡಿದ್ದರು.
ಸಾಕಾನೆ ಅರ್ಜುನ ಸೇರಿದಂತೆ ದಸರಾ ಪಟ್ಟದಾನೆಗಳ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಗಳ ಮ್ಯೂಸಿಯಂ ಸ್ಥಾಪಿಸುವಂತೆಯೂ ಅವರು ಸಭಾಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.