ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ರಾಜಸ್ಥಾನದ ಕರೌಲಿಯಲ್ಲಿ ನಡೆದ ಕಲ್ಲು ತೂರಾಟ ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯ ಸರಕಾರವು ತುಷ್ಟೀಕರಣದ ನೀತಿಯಲ್ಲಿ ತೊಡಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.
ನಿನ್ನೆ ರಾಜಸ್ಥಾನದ ಕರೌಲಿಯಲ್ಲಿ ಹಿಂದು ನವ ಸಂವತ್ಸರದ ಸಂದರ್ಭದಲ್ಲಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, 27 ಮಂದಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ, 10 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.
ಘಟನೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಸಚಿವರು, ಭಾರತದಲ್ಲಿ ಭಾರತೀಯ ಹೊಸ ವರ್ಷವನ್ನು ಆಚರಿಸುವಾಗ ಜನರ ಮೇಲೆ ದಾಳಿ ಮಾಡಲಾಗುತ್ತಿದ್ದರೆ, ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ರಾಜಸ್ಥಾನ ಸರಕಾರವು ತುಷ್ಟೀಕರಣದ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ರಾಜಸ್ಥಾನದ ಶಾಂತಿಯುತ ಪ್ರದೇಶಗಳು ಈಗ ಗಲಭೆ, ಅಪರಾಧ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಿಂದ ಬಳಲುತ್ತಿವೆ. ರಾಜ್ಯದಲ್ಲಿ ಅಪರಾಧಿಗಳು ನಿರ್ಭೀತರಾಗಿದ್ದಾರೆ. ರಾಜ್ಯ ಪೊಲೀಸರೂ ರಾಜಕಾರಣಿಗಳ ಅಡಿಯಾಳಾಗಿದ್ದಾರೆ. ಅವರು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಮರೆತಿದ್ದಾರೆ ಎಂದು ಕೇಂದ್ರ ಸಚಿವ ಶೇಖಾವತ್ ಹೇಳಿದರು.
ನಗರದಲ್ಲಿ ಪೊಲೀಸರಿಂದ ಫ್ಲ್ಯಾಗ್ ಮಾರ್ಚ್
ಕಲ್ಲು ತೂರಾಟದ ಘಟನೆಯ ಒಂದು ದಿನದ ನಂತರ ರಾಜಸ್ಥಾನ ಪೊಲೀಸರು ಭಾನುವಾರ ಫ್ಲ್ಯಾಗ್ ಮಾರ್ಚ್ ನಡೆಸಿದರು. ಘಟನೆಯ ನಂತರ ಕರೌಲಿ ಜಿಲ್ಲೆಯಲ್ಲಿ ಏ. 4ರವರೆಗೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ರಾಜಸ್ಥಾನದ ಕರೌಲಿಯಲ್ಲಿ ‘ಶೋಭಾ ಯಾತ್ರೆ’ ಮೇಲೆ ಕಲ್ಲು ತೂರಾಟ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿರುವ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ರಾಜ್ಯದ ಜನತೆಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.