ತನ್ನನ್ನು ಕಿಡ್ನಾಪ್ ಮಾಡಿದ್ದಾರೆಂದು ತನ್ನ ಹೆತ್ತವರಿಂದಲೇ ಸುಲಿಗೆಗೆ ಯತ್ನಸಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗೋವಾದ ಕ್ಯಾಸಿನೋದಲ್ಲಿ ಮೋಜು ಮಸ್ತಿ ಮಾಡುತ್ತಾ, ಹಣಕ್ಕಾಗಿ ಮಗನೇ ತಂದೆ ತಾಯಿಯ ಬಳಿ ಅಪಹರಣದ ಕಥೆ ಕಟ್ಟಿ 5 ಲಕ್ಷ ರು. ಬೇಡಿಕೆ ಇಟ್ಟಿದ್ದ ಘಟನೆ ನಗರದ ಅಂಬಾಗಿಲಿನಲ್ಲಿ ನಡೆದಿದೆ. ಆರೋಪಿ ಮಗ ವರುಣ್ ನಾಯಕ್ (26) ಈಗ ಹಿರಿಯಡ್ಕ ಕಾರಗೃಹದಲ್ಲಿದ್ದಾರೆ.

ಜೂ.26ರಂದು ವರುಣ್ ತಾಯಿ ಮೊಬೈಲಿಗೆ ಮುಂಜಾನೆ ಮೂರು ಗಂಟೆ ಸುಮಾರಿಗೆ ಕರೆ ಮಾಡಿ, ಯಾರೋ ತನ್ನನ್ನು ಅಪಹರಿಸಿದ್ದು, ಬಿಡುಗಡೆ ಮಾಡುವುದಕ್ಕೆ 5 ಲಕ್ಷ ರು. ಕೇಳಿದ್ದಾರೆ, ಕೊಡದಿದ್ದರೇ ಕೊಲ್ಲುವುದಾಗಿ ಹೇಳಿದ್ದಾರೆ ಎಂದು ಅಳುತ್ತಾ ಹೇಳಿದ್ದನು

ಗಾಬರಿಯಾದ ಹೆತ್ತವರು ಉಡುಪಿ ನಗರಠಾಣೆಗೆ ದೂರು ನೀಡಿದ್ದರು. ಪೊಲೀಸರು ಆತನ ಮೊಬೈಲ್ ಲೋಕೇಶನ್ ಹುಡುಕಿದಾಗ ಆತ ಗೋವಾದಲ್ಲಿರುವುದು ಪತ್ತೆಯಾಯಿತು. ತಕ್ಷಣ ಇಬ್ಬರು ಪೊಲೀಸರು ಮೊಬೈಲ್ ಲೋಕೇಶನ್ ಆಧಾರದಲ್ಲಿ ಗೋವಾಕ್ಕೆ ಹೋದಾಗ ಶಾಕ್ ಕಾದಿತ್ತು, ಅಲ್ಲಿ ವರುಣ್ ಗೆಳೆಯರೊಂದಿಗೆ ಕ್ಯಾಸಿನೋದಲ್ಲಿ ಮೋಜು ಮಾಡುತಿದ್ದನು.

ಆತನನ್ನು ವಶಕ್ಕೆ ಪಡೆದು ಸರಿಯಾಗಿ ವಿಚಾರಿಸಿದಾಗ, ಅರ್ಧದಲ್ಲಿ ಶಿಕ್ಷಣ ನಿಲ್ಲಿಸಿದ್ದ ವರುಣ್ ಮೋಜು ಮಾಡುವುದಕ್ಕೆ ಹಣವಿಲ್ಲದೇ, ಹೆತ್ತವರನ್ನೇ ಸುಲಿಗೆ ಮಾಡಲು ಈ ಉಪಾಯ ಮಾಡಿದ್ದು ಪತ್ತೆಯಾಗಿದೆ.

ಇದೀಗ ಆತನ ಮೇಲೆ ವಂಚನೆ ಯತ್ನ ಮತ್ತು ಪೊಲೀಸರ ಸಮಯ ವ್ಯರ್ಥ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!