ಹೊಸದಿಗಂತ ವರದಿ,ಕಲಬುರಗಿ:
ನಾಲ್ಕು ಮಕ್ಕಳ ಪೈಕಿ ಎರಡು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಗರದ ವಿರೇಂದ್ರ ಪಾಟೀಲ್ ಬಡಾವಣೆ ಬಳಿ ನಡೆದಿದೆ.
ಲಕ್ಷ್ಮಿಕಾಂತ ಎಂಬ ವ್ಯಕ್ತಿಯಿಂದಲೇ ತನ್ನ ಇಬ್ಬರು ಮಕ್ಕಳ ಕೊಲೆಯಾಗಿದ್ದು, ಸೋನಿ (11), ಮಯೂರಿ (9) ಎಂಬ ಹೆಸರಿನ ಪುಟ್ಟ ಹೆಣ್ಣು ಮಕ್ಕಳನ್ನೆ ಪಾಪಿ ತಂದೆ ಕೊಲೆ ಮಾಡಿದ್ದಾನೆ.
ಲಕ್ಷ್ಮಿಕಾಂತ ಕಲಬುರಗಿ ನಗರದ ನಿವಾಸಿಯಾಗಿದ್ದು,ವೃತ್ತಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು.ಲಕ್ಷ್ಮಿಕಾಂತ ಪತ್ನಿ ನಾಲ್ಕು ತಿಂಗಳ ಹಿಂದೆಯಷ್ಟೇ ಬೇರೆ ಪುರುಷನ ಜೊತೆಗೆ ಓಡಿ ಹೋಗಿದ್ದಳು.ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಅಜ್ಜಿ ಮನೆಯಲ್ಲಿ ಮಕ್ಕಳು ವಾಸವಿದ್ದರು.ನಾಲ್ಕು ದಿನಗಳ ಹಿಂದೆ ಲಕ್ಷ್ಮಿಕಾಂತ ಮಕ್ಕಳನ್ನು ಕರೆದುಕೊಂಡು ಹೋಗಿದ್ದನು ಎಂದು ತಿಳಿದುಬಂದಿದೆ.
ನಾಲ್ಕು ದಿನಗಳ ಕಾಲ ಮಕ್ಕಳನ್ನು ಆಟೋದಲ್ಲಿ ಕುಡಿಸಿಕೊಂಡು ಕಲಬುರಗಿ ನಗರದೆಲ್ಲೆಡೆ ಓಡಾಟ ಮಾಡಿದ್ದ,ನಿನ್ನೆ ರಾತ್ರಿ ಮಕ್ಕಳನ್ನು ಕೊಲೆ ಮಾಡಿದ್ದಾನೆ.
ಎರಡು ಮಕ್ಕಳ ಶವವನ್ನು ಆಟೋದಲ್ಲಿಯೇ ಇಟ್ಟುಕೊಂಡು ಓಡಾಡಿದ್ದಾನೆ.ಬುಧವಾರ ಮಧ್ಯಾಹ್ನದ ಸಮಯದಲ್ಲಿ ತಾನೇ ಪೋಲಿಸರಿಗೆ ಇನ್ನೂಳಿದ ಇಬ್ಬರು ಮಕ್ಕಳಾದ ನವೀನ್, ಮತ್ತು ಶ್ರೇಯಾಳೊಂದಿಗೆ ಶರಣಾಗಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.