ಹೊಸದಿಗಂತ ಡಿಜಿಟಲ್ ಡೆಸ್ಕ್
ಚಾಲುಕ್ಯರ ಕಾಲದಿಂದಲೂ ಪ್ರತಿ ವರ್ಷ ಒಳಕೋಟಿ (ಕೋಟೆಯೊಳಗಡೆ) ಭವಾನಿ ದೇವಿಯನ್ನು ಸ್ಥಾಪಿಸುವ ಇತಿಹಾಸವಿದೆ. ತಲತಲಾಂತರದಿಂದಲೂ ವಿಜಯ ದಶಮಿ ದಿನದಂದು ದೇವಿಯ ಜಾತ್ರೆಯ ಶೋಭಾಯಾತ್ರೆ ಒಳಕೋಟಿಯಿಂದ ಬೀದರ ನಗರದ ಜನವಡಾ ರಸ್ತೆಯಲ್ಲಿರುವ ರೋಕಡೆ ಹನುಮಾನ ಮಂದಿರದವರೆಗೆ ಸಾಗುತ್ತದೆ.
ಶೋಭಾಯಾತ್ರೆಯು ರಜಪುತ ಗಲ್ಲಿ- ಗಣೇಶ ಪೂಜಾ, ಗುಂಬಜ ದರವಾಜ-ಪಾಂಡುರಂಗ ಪೂಜೆ, ನಂತರ ಭೀಮ ನಗರ-ಮರಗೆಮ್ಮ ಪೂಜೆ, ಭವಾನಿ ಪೂಜೆ, ರಾಮ ಮಂದಿರ ಪೂಜೆ, ಉಸ್ಮಾನ ಗಂಜನಲ್ಲಿ ಭವಾನಿ ಮತ್ತು ಕೃಷ್ಣ ಪೂಜೆ ಮುಗಿಸಿ ನಂತರ ಗಾರ್ಡನ್ ರಸ್ತೆಯಿಂದ ಶಹಾಗಂಜ್ ಕಮಾನ್ ಮೂಲಕ ಮುಲ್ತಾನಿ ಕಾಲೋನಿ ಪ್ರವೇಶಿಸಿ ಶಹಾಗಂಜ್ ಹನುಮಾನ ಮಂದಿರದಲ್ಲಿ ಪೂಜೆ ನೆರವೇರಿಸಿ, ಅಂಬೇಡ್ಕರ್ ವೃತ್ತದ ಮುಖಾಂತರ ಕ್ರಾಂತಿ ಗಣೇಶ, ಶಹಾ ಗಂಜ್ ಕಮಾನ್, ಚಿತ್ರಾ ಕಾರ್ನರ್, ವಿನಾಯಕ ಚೌಕ್ ಮುಖಾಂತರ ಚೌಬಾರಾ, ನಗರ ಪೊಲೀಸ್ ಠಾಣೆ, ಪುರಾನಾ ಗವಾನ ಮದರಸಾ ಬಳಿ ದೇವಿ ಪೂಜೆ ಮುಗಿಸಿ ನಂತರ ಮಧ್ಯರಾತ್ರಿ ಒಳಕೋಟಿಗೆ ತಲುಪುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಗವಾನ ಮದರಸಾದಲ್ಲಿ ಪೂಜೆ ಕಾಯುತಿದ್ದಾಗ, ಅದರ ಹೊರಗಡೆಯ ಗೇಟ್ ಗೆ ಬೀಗ ಹಾಕಲಾಗಿತ್ತು. ಆಗ ಪೊಲೀಸರು ಪುರಾತತ್ವ ಇಲಾಖೆಯ ನೌಕರರನ್ನು ಕರೆಸಿ ಬೀಗವನ್ನು ತೆಗೆಸಿ ಭಕ್ತರಿಗೆ ಮದರಸಾದಲ್ಲಿ ಪ್ರವೇಶಿಸಿ ಪೂಜೆ ನೆರವೇರಿಸಲು ಅನುವು ಮಾಡಿಕೊಟ್ಟರು. 10 ರಿಂದ 12 ಜನ ಭಕ್ತರು ಅಲ್ಲಿ ಪೂಜೆ ನೆರವೇರಿಸಿ ಹಿಂತಿರುಗಿ ಬಂದರು.
ಆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಅದನ್ನು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದರಲ್ಲಿ ಹಿಂದುಗಳು ಒತ್ತಾಯ ಪೂರ್ವಕವಾಗಿ ಒಳಸೇರಿ ಪೂಜೆ ಮಾಡಿ ಗದ್ದಲ ಮಾಡಿದ್ದಾರೆ, ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿದ್ದಾರೆ. ಹಿಂದು-ಮುಸ್ಲಿಂ ಬಾಂಧವರ ಶಾಂತಿಗೆ ಭಂಗ ತರುವಂತೆ ದುರುದ್ದೇಶದಿಂದ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಅನುಮತಿ ಪಡೆದೇ ಈ ಪೂಜೆ ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಪೂರ್ಣ ಕಾರ್ಯಕ್ರಮದಲ್ಲಿ ಪೊಲೀಸ್ ಬೆಂಗಾವಲಲ್ಲಿಯೇ ನೆರವೇರಿದೆ. ಹೀಗಿರುವಗ ಭಕ್ತಾದಿಗಳಿಂದ ಯಾವುದೇ ತರಹದ ಅಸಾಂವಿಧಾನಿಕ, ಇತರೆ ಧರ್ಮದವರ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಕೃತ್ಯವೆಸಗಿರುವುದಿಲ್ಲ. ಇದಕ್ಕೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಾಕ್ಷಿಯಾಗಿರುತ್ತದೆ.
ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಯತ್ತ ಗಮನಕೊಡದೇ ಬೀದರ ಜಿಲ್ಲೆಯ ಬಾಂಧವರು ಕೋಮು ಸೌಹಾರ್ದತೆ ಮುಂದುವರಿಸಿ ಶಾಂತಿ ಕಾಪಾಡಬೇಕೆಂದು ವಿಶ್ವ ಹಿಂದು ಪರಿಷತ್ ಕಾರ್ಯಕಾರಣಿ ಸದಸ್ಯರಾದ ಎಸ್. ರಾಮಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ