ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ಹಲವಾರು ಗಂಟೆಗಳ ಕಾಲ ನಡೆದ ದಾಳಿಯಲ್ಲಿ, ಇಡಿ ಸುಮಾರು 20 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಂಡಿದೆ.
ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿಯಲ್ಲಿನ ಅಕ್ರಮ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಲ್ಲಿ 20 ಕೋಟಿ ರೂಪಾಯಿ ಸಿಕ್ಕಿದೆ.
ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿಯಾಗಿರುವ ಅರ್ಪಿತಾ ಮುಖರ್ಜಿ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅರ್ಪಿತಾ ಮುಖರ್ಜಿ ಒಟ್ಟು 20 ಕ್ಕೂ ಹೆಚ್ಚು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ತಪಾಸಣೆ ಮುಂದುವರೆದಿದೆ.
ಜೊತೆಗೆ ಶಿಕ್ಷಣ ಸಚಿವ ಪರೇಶ್ ಅಧಿಕಾರಿ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಎಸ್ಎಸ್ಸಿ ನೇಮಕಾತಿ ಹಗರಣ ಪ್ರಕರಣದಲ್ಲಿ ಇಬ್ಬರೂ ಸಚಿವರನ್ನು ಸಿಬಿಐ ಈಗಾಗಲೇ ವಿಚರಾಣೆಗೊಳಪಡಿಸಿದೆ.
ಹಣ ಎಣಿಕೆ ಯಂತ್ರಗಳ ಮೂಲಕ ನಗದು ಎಣಿಕೆಗೆ ಶೋಧ ತಂಡಗಳು ಬ್ಯಾಂಕ್ ಅಧಿಕಾರಿಗಳ ನೆರವು ಪಡೆಯುತ್ತಿವೆ. ಚಟರ್ಜಿ ಅವರಲ್ಲದೆ, ರಾಜ್ಯ ಶಿಕ್ಷಣ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಮತ್ತು ಇತರರ ಮೇಲೂ ಇಡಿ ದಾಳಿ ನಡೆಸಿದೆ.