ಹೊಸದಿಗಂತ ಡಿಜಿಟಲ್ ಡೆಸ್ಕ್:
2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಮೂರು ಅರ್ವಾಡ್ಗಳು ಸಿಕ್ಕಿವೆ. ‘ಡೊಳ್ಳು’, ‘ತಲೆದಂಡ’ ಹಾಗೂ ‘ನಾದದ ನವನೀತ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿದೆ.
ಸಾಗರ್ ಪುರಾಣಿಕ್ ನಿರ್ದೇಶನ ಮತ್ತು ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾ ಕನ್ನಡ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ದಿ.ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾಗೂ ರಾಷ್ಟ್ರ ಪ್ರಶಸ್ತಿ ಸಂದಿದ್ದು, ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಪ್ರಶಸ್ತಿ ಲಭಿಸಿದೆ. ಅಲ್ಲದೇ, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರಕ್ಕೂ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರದ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.
ದಿ.ಸಂಚಾರಿ ವಿಜಯ್ ಅಭಿನಯದ ಹಾಗೂ ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವ ಬಗ್ಗೆ ನಿರ್ದೇಶಕ ಪ್ರವೀಣ್ ಕೃಪಾಕರ್ ಖುಷಿಯಾಗಿದ್ದಾರೆ. ನನ್ನ ಪ್ರಥಮ ನಿರ್ದೇಶನದ ಸಿನಿಮಾ. ಪ್ರಶಸ್ತಿಯ ಸಿಗಬೇಕೆಂದು ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಲಿಲ್ಲ. ಭವಿಷ್ಯದಲ್ಲಿ ಪರಿಸರವನ್ನ ಉಳಿಸುವ ಪ್ರಯತ್ನದಿಂದ ಮನದಲ್ಲಿಟ್ಟುಕೊಂಡು ‘ತಲೆದಂಡ’ ಸಿನಿಮಾ ಮಾಡಿದ್ದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಂಚಾರಿ ವಿಜಯ್ ಅವರನ್ನು ಸ್ಮರಿಸಿರುವ ಅವರು, ಸಂಚಾರಿ ವಿಜಯ್ ನಮ್ಮ ಜೊತೆ ಇಲ್ಲ. ಆದರೆ, ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮಾಡಿರುವ ಪಾತ್ರಕ್ಕೆ ಪ್ರಶಸ್ತಿ ಬರುತ್ತೆ ಅಂತಾ ಅಂದುಕೊಂಡಿದ್ವು. ಆದರೆ, ಈಗ ವಿಜಯ್ ಗೆ ಬರಲಿಲ್ಲ ಎಂದು ತಿಳಿಸಿದರು.
ಕನ್ನಡ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದಕ್ಕೆ ನಟಿ ರಮ್ಯಾ ಟ್ವೀಟ್ ಮಾಡಿ, ಪ್ರಶಸ್ತಿ ಪುರಷ್ಕೃತರಿಗೆ ಹಾಗೂ ಸಿನಿಮಾ ತಂಡಗಳಿಗೆ ಶುಭ ಹಾರೈಯಿಸಿದ್ದಾರೆ.