ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತನ್ನೊಂದಿಗೆ ಪ್ರಯಾಣಿಸಬೇಕಿದ್ದ 35 ಪ್ರಯಾಣಿಕರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ನಿಗದಿತ ಸಮಯಕ್ಕಿಂತ ಮೊದಲೇ ವಿಮಾನವೊಂದು ಸಿಂಗಾಪುರಕ್ಕೆ ಹಾರಿದ ಘಟನೆ ನಡೆದಿದೆ. ವಿಮಾನ ನಿಗದಿತ ಸಮಯಕ್ಕೂ ಮುನ್ನ ಹೇಗೆ ಟೇಕಾಫ್ ಆಯಿತು ಎಂಬುದರ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಮೂಲತಃ ಅಮೃತಸರ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ 7.55ಕ್ಕೆ ಹೊರಡಬೇಕಿದ್ದ ಸ್ಕೂಟ್ ಏರ್ಲೈನ್ ವಿಮಾನವು ಅದರ ನಿರ್ಗಮನ ಸಮಯಕ್ಕಿಂತ ಗಂಟೆಗಳ ಮೊದಲು ಅಂದರೆ ಮಧ್ಯಾಹ್ನ 3 ಗಂಟೆಗೆ ಟೇಕ್ ಆಫ್ ಆಗಿದೆ. ಸದ್ಯ ಈ ಘಟನೆಯ ಬಗ್ಗೆ ವಾಯುಯಾನ ನಿಯಂತ್ರಣ ಪ್ರಾಧಿಕಾರ ತನಿಖೆ ಪ್ರಾರಂಭಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಕೂಟ್ ವಕ್ತಾರರು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ನಿರ್ಗಮನದ ಮೇಲೆ ಪರಿಣಾಮ ಬೀರುವ ಕಾರಣ ನಿರ್ಗಮನ ಸಮಯದ ಬದಲಿಗೆ ಮಧ್ಯಾಹ್ನ 3:45 ಕ್ಕೆ ಅಮೃತಸರದಿಂದ ಹೊರಡಲು ವಿಮಾನವನ್ನು ಮರು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವ ಗೋ ಫಸ್ಟ್ ವಿಮಾನವು 55 ಪ್ರಯಾಣಿಕರನ್ನು ಬಿಟ್ಟು ಹೋದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಶಟಲ್ ಬಸ್ ಮೂಲಕ ವಿಮಾನ ಹತ್ತಲು ಬರುತ್ತಿದ್ದ 55 ಜನರನ್ನು ಬಿಟ್ಟು ಈ ವಿಮಾನ ಹಾರಿತ್ತು. ನಿಲ್ದಾಣದಲ್ಲೇ ಉಳಿದ ಪ್ರಯಾಣಿಕರನ್ನು ನಾಲ್ಕು ಗಂಟೆಗಳ ನಂತರ ಮತ್ತೊಂದು ವಿಮಾನದ ಮೂಲಕ ಕಳುಹಿಸಲಾಯಿತು. ನಿಯಂತ್ರಕ ಕಟ್ಟುಪಾಡುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಯ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಡಿಜಿಸಿಎ ಗೋ ಫಸ್ಟ್ ಏರ್ಲೈನ್ಸ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದೆ.