ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯರು ಅಂದರೆ ಎಲ್ಲರೂ ಒಂದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೇವಲ ಮತಕ್ಕಾಗಿ ಅಲ್ಲ. ಸಮಾಜದ ದೃಷ್ಟಿಯಿಂದ ಒಂದಾಗಿ ಹೋಗಬೇಕು ಎಂದು ಮೋದಿ ಹೇಳಿದ್ದಾರೆ ಅಷ್ಟೇ. ಮುಸಲ್ಮಾನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ವಿರೋಧಿ ಅಲೆ ಎನ್ನುವ ಪದವೇ ಬಿಜೆಪಿಗೆ ಅನ್ವಯವಾಗುವುದಿಲ್ಲ. ತ್ರಿಪುರ, ನಾಗಾಲ್ಯಾಂಡ್, ಮಿಜೋರಾಮ್, ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಒಟ್ಟಾರೆ ಚುನಾವಣೆ ಎನ್ನುವುದು ಎಂದಿನ ಪ್ರಕ್ರಿಯೆ, 365 ದಿನ 24 ಗಂಟೆಯೂ ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಲಿದ್ದೇವೆ. ಬಿಜೆಪಿ ಕಾರ್ಯಕರ್ತ, ಪ್ರತಿನಿಧಿ ಎಂದರೆ ಅದಕ್ಕೆ ಸಿದ್ದನಾಗಿರಬೇಕು ಎನ್ನುವ ಸಂದೇಶವನ್ನು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೊಡಲಾಗಿದೆ ಎಂದರು.
ಮುಸಲ್ಮಾನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಹೆಚ್ಚು ಚರ್ಚಿತವಾಗುತ್ತಿದೆ. ನಮ್ಮದು ರಾಷ್ಟ್ರೀಯತೆ ಇರುವ ಪಕ್ಷ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಕೇವಲ ಮತಕ್ಕಾಗಿ ಅಲ್ಲ, ಎಲ್ಲರಿಗೂ ಎಲ್ಲಾ ಸಹಕಾರ ಕೊಡಬೇಕು. ಪ್ರೋತ್ಸಾಹ ಕೊಡಬೇಕು ಎನ್ನುವುದು ಇದರ ಉದ್ದೇಶ. ತುಷ್ಟೀಕರಣದ ರಾಜಕಾರಣವನ್ನು ಬಿಜೆಪಿ ಮಾಡಲ್ಲ ಎಂದು ಹೇಳಿದರು.