ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ದೊಡ್ಡ ರಾಜಕೀಯ ಬಿರುಗಾಳಿ ಎದ್ದಿದೆ. ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಪಕ್ಷದಲ್ಲಿ ಮತ್ತೆ ವಿಭಜನೆಯ ಮುನ್ಸೂಚನೆ ಸಿಕ್ಕಿದ್ದು, ಲೋಕಸಭೆಯಲ್ಲೂ ಪಕ್ಷ ಇಳಿಮುಖವಾಗುವ ಹಾದಿಯಲ್ಲಿದೆ. ದೆಹಲಿಯಲ್ಲಿ ನಡೆದ ಪ್ರಮುಖ ಸಂಸದೀಯ ಸಭೆಗೆ ಪಕ್ಷದ ಒಟ್ಟು 9 ಸಂಸದರ ಪೈಕಿ 6 ಸಂಸದರು ಗೈರಾಗುವ ಮೂಲಕ ಉದ್ಧವ್ಗೆ ಬಿಗ್ ಶಾಕ್ ನೀಡಿದ್ದಾರೆ.
ಸಭೆಗೆ ಹಾಜರಾದವರು ಮತ್ತು ಗೈರಾದವರು ಯಾರು?
ಪಕ್ಷದ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಲು ‘ವ್ಹಿಪ್’ ಜಾರಿಗೊಳಿಸಿದ್ದರೂ ಕೇವಲ ಮೂವರು ಲೋಕಸಭಾ ಸದಸ್ಯರಾದ ಅನಿಲ್ ದೇಸಾಯಿ, ಅರವಿಂದ್ ಸಾವಂತ್ ಮತ್ತು ರಾಜಾಭಾವು ವಾಜೆ ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಸಂಜಯ್ ಜಾಧವ್, ಭೌಸಾಹೇಬ್ ವಾಕ್ಚೌರೆ, ಓಂರಾಜೆ ನಿಂಬಾಳ್ಕರ್, ಸಂಜಯ್ ದಿನ ಪಾಟೀಲ್, ಸಂಜಯ್ ದೇಶಮುಖ್ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಸಭೆಯಿಂದ ದೂರ ಉಳಿದಿದ್ದಾರೆ.
ಶಿಂಧೆ ಬಣಕ್ಕೆ ಸಂಸದರ ಲಗ್ಗೆ?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಗೈರಾದ ಈ ಆರು ಸಂಸದರು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಲು ನಿರ್ಧರಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬರೆಹೊರಬರಲು ಅಗತ್ಯವಿರುವ 2/3ರಷ್ಟು (6 ಸಂಸದರು) ಬಹುಮತ ಇವರ ಬಳಿ ಇದ್ದು, ಈಗಾಗಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರತ್ಯೇಕ ಬಣ ರಚನೆ ಮತ್ತು ವಿಲೀನದ ಕುರಿತು ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಉದ್ಧವ್ ಸೇನೆಯ ಮುಂದಿನ ನಡೆ ಏನು?
ಇತ್ತ ಉದ್ಧವ್ ಠಾಕ್ರೆ ಬಣವು ವ್ಹಿಪ್ ಉಲ್ಲಂಘಿಸಿದ ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ಗಂಭೀರ ಚಿಂತನೆ ನಡೆಸಿದೆ.



