ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿಜ್ನೋರ್ನಲ್ಲಿ ಕತ್ವಾಲಿ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ಇದರಿಂದಾಗಿ ಹರಿದ್ವಾರ ನಜೀಬಾಬಾದ್ ರಸ್ತೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಡು ನೀರಿನ ನಿಂತಿದ್ದು, ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಬಸ್ಸಿನಲ್ಲಿ ಸುಮಾರು 25 ಪ್ರಯಾಣಿಕರಿದ್ದರು ಎನ್ನಲಾಗಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಬಲವಾದ ಪ್ರವಾಹದ ಮಧ್ಯದಲ್ಲಿ ಬಸ್ ಸಿಲುಕಿಕೊಂಡಿದೆ. ಬಸ್ಸಿನಲ್ಲಿ ಸಿಲುಕಿದ್ದವರನ್ನು ರಕ್ಷಿಸುವಲ್ಲಿ ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂತು.
ನೀರಿನಲ್ಲಿ ಬಸ್ ಪಲ್ಟಿಯಾಗುವುದನ್ನು ತಡೆಯಲು ಕ್ರೇನ್ ನಿಯೋಜಿಸಲಾಗಿತ್ತು. ಈ ಕ್ರೇನ್ ಸಹಾಯದಿಂದ ಬಸ್ಸಿನ ಪ್ರಯಾಣಿಕರನ್ನು ರಕ್ಷಿಸಲು ಕಸರತ್ತು ನಡೆಸಲಾಗುತ್ತಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪೊಲೀಸರು ಕೂಡಾ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ನದಿ ನೀರು ಅಷ್ಟು ರಭಸವಾಗಿ ಹರಿಯುತ್ತಿದ್ದರೂ ಚಾಲಕ ಅದನ್ನು ಗಮನಿಸದೆ ದುಸ್ಸಾಹಸಕ್ಕೆ ಕೈ ಹಾಕಿದ್ದೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದರು.
ಮಳೆಯಿಂದಾಗಿ ಕತ್ವಾಲಿ ನದಿಯ ನೀರಿನ ಮಟ್ಟ ಏರಿಕೆಯಾಗಿ ಸೇತುವೆಯ ಕೆಳಭಾಗಕ್ಕೂ ನೀರು ನುಗ್ಗಿದೆ.