ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಕ್ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ನಡೆದಿದೆ.
ಮೃತ ದ್ವಿಚಕ್ರವಾಹನ ಸವಾರ ಒಡಿಶಾ ಮೂಲದ ಲುಲ್ಲು ಲಾಲ್ (30)ಎಂದು ಗುರುತಿಸಲಾಗಿದ್ದು, ಕೊಪ್ಪಳ ತಾಲೂಕಿನ ಮೆತಗಲ್ ಬಳಿ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ಅಂಜನಾದ್ರಿ ಆಂಜನೇಯನ ದರುಶನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತ ಲುಲ್ಲು ಸೇರಿದಂತೆ ಇಬ್ಬರು ಬೆಟ್ಟಕ್ಕೆ ಹೊರಟಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಗೆ ಬಿದ್ದಿದೆ.
ಹಿಂಬದಿ ಸವಾರನಿಗೆ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.