ಹೊಸದಿಗಂತ ವರದಿ ಮಡಿಕೇರಿ:
ಚೆಟ್ಟಳ್ಳಿಯಲ್ಲಿರುವ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಭೇಟಿ ನೀಡಿ, ಕೇಂದ್ರದ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.
ಕೇಂದ್ರದ ಚಟುವಟಿಕೆಗಳ ಬಗ್ಗೆ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಎಸ್. ರಾಜೇಂದಿರನ್, ವಿಜ್ಞಾನಿ ಮುರುಳೀಧರನ್ ಮಾಹಿತಿ ನೀಡಿದರು. ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಹಣ್ಣಿನ ಗಿಡಗಳ ವೃದ್ಧಿ ಸಂಬಂಧ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ರವಿ ಕಾಳಪ್ಪ ಮಾಹಿತಿ ಪಡೆದರು.
ಕೊಡಗಿನ ಕಿತ್ತಳೆ ಬೆಳೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಅಧಿಕಾರಿಗಳಿಗೆ ಸಲಹೆ ನೀಡಿದರು. ದಶಕದ ಹಿಂದೆ ಕೊಡಗಿನ ಕಿತ್ತಳೆ ಸಾಕಷ್ಟು ಜನಪ್ರಿಯವಾಗಿತ್ತು. ನಂತರದಲ್ಲಿ ವಿವಿಧ ಕಾರಣದಿಂದ ಬೆಳೆಯುವವರ ಪ್ರಮಾಣ ಕಡಿಮೆಯಾಯಿತು. ಆದರೆ ಇಂದಿಗೂ ಕೊಡಗಿನ ಕಿತ್ತಳೆಗೆ ಬೇಡಿಕೆ ಇದೆ. ರೈತರು ಕಿತ್ತಳೆ ಬೆಳೆಯಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಡಳಿ ಹಾಗೂ ಸಂಶೋಧನಾ ಕೇಂದ್ರ ಜಂಟಿಯಾಗಿ ಕಾರ್ಯಪ್ರವೃತ್ತವಾಗುವ ಬಗ್ಗೆ ಅಧ್ಯಕ್ಷರು ಇಂಗಿತ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಸಿಗುವ ಅಪರೂಪದ ಹಣ್ಣುಗಳು ಹಾಗೂ ಅವುಗಳ ಔಷಧೀಯ ಗುಣಗಳ ಬಗ್ಗೆ ಮುರುಳೀಧರ್ ಮಾಹಿತಿ ನೀಡಿದರು.