August 8, 2026
Saturday, August 8, 2026
spot_img

ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಬಿಜೆಪಿ ಕರೆ; ಸ್ವಂತ ವೆಚ್ಚದಲ್ಲಿ ಧ್ವಜ ವಿತರಿಸಿದ ರೂಪಾಲಿ ನಾಯ್ಕ

ಹೊಸದಿಗಂತ ವರದಿ ಕಾರವಾರಃ

ಪಕ್ಷದ ಸಂಘಟನೆಯಲ್ಲಿ ನಾವು ಮುಂಚೂಣಿಯಲ್ಲಿರಬೇಕು. ಪ್ರತಿ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.

ಶಿರಸಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಉತ್ತರ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಜಾಗೃತರಾಗಬೇಕು. ಏಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ಮೋದಿ ಅವರ ಗುರಿ ಈಡೇರುವಲ್ಲಿ ನಾವೆಲ್ಲ ಕೈಜೋಡಿಸಬೇಕು.  ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ನಾವು ಯಶಸ್ವಿಯಾಗಿಸೋಣ ಎಂದು ಹರ್ ಘರ್ ತಿರಂಗಾದ ರಾಜ್ಯ ಸಂಚಾಲಕಿಯೂ ಆಗಿರುವ ರೂಪಾಲಿ ಎಸ್.ನಾಯ್ಕ ತಿಳಿಸಿದರು.

ಹರ್ ಘರ್ ತಿರಂಗಾ ಅಭಿಯಾನ ನಾವೆಲ್ಲ ಹೆಮ್ಮೆಯಿಂದ ಪಾಲ್ಗೊಳ್ಳಬೇಕಾದ ಕಾರ್ಯಕ್ರಮ. ನರೇಂದ್ರ ಮೋದಿ ಅವರು 12 ವರ್ಷಗಳ ಹಿಂದೆ ಆರಂಭಿಸಿದ ಈ ಅಭಿಯಾನ ಯಶಸ್ವಿಯಾಗಬೇಕು. ದೇಶಭಕ್ತಿ ಎಲ್ಲೆಡೆ ಮೊಳಗಬೇಕು ಎಂದು ಹೇಳಿದರು. ತಮ್ಮ ಸ್ವಂತ ಖರ್ಚಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಮಂಡಲಕ್ಕೆ ತಲಾ 500 ಧ್ವಜಗಳನ್ನು ವಿತರಿಸಿದರು.

ಇದನ್ನೂ ಓದಿ:

ಅಧ್ಯಕ್ಷತೆಯನ್ನುಪಕ್ಷದ ಜಿಲ್ಲಾ ಅಧ್ಯಕ್ಷ ಎನ್. ಎಸ್.ಹೆಗಡೆ ವಹಿಸಿದ್ದರು. ನಿಕಟ ಪೂರ್ವ ಶಾಸಕರುಗಳಾದ ಸುನೀಲ್ ಹೆಗಡೆ, ಸುನೀಲ್ ನಾಯ್ಕ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ಪ್ರಮುಖರಾದ ಕೆ ಜಿ ನಾಯ್ಕ್, ಗೋವಿಂದ ನಾಯ್ಕ್, ಅಶೋಕ ಛಲವಾದಿ, ಎಮ್ ಜಿ ಭಟ್, ಸಂತೋಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ್ ಉಪಸ್ಥಿತರಿದ್ದರು. ಹರ್ ಘರ್ ತಿರಂಗ ಸಂಚಾಲಕ ಸುಬ್ರಾಯ ವಾಳ್ಕೆ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಆರ್.ಡಿ.ಹೆಗಡೆ ಎಸ್ ಐ ಆರ್ ಬಗ್ಗೆ ಮಾಹಿತಿ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !