ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕನ ಸಾವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಬೆಂಕಿಯನ್ನು ಹೊತ್ತಿಸಿದೆ. ತೃಣಮೂಲ ಕಾಂಗ್ರೆಸ್ ತಮ್ಮ ಪಕ್ಷದ ನಾಯಕನನ್ನು ಹತ್ಯೆ ಮಾಡಿರುವುದಾಗಿ ಬಿಜೆಪಿ ಆರೋಪಿಸಿದ್ದು, ಬಿಜೆಪಿ ಮಾಡಿರುವ ಆರೋಪಗಳನ್ನು ಟಿಎಂಸಿ ತಳ್ಳಿ ಹಾಕಿದೆ. ಮೊಯಿನಾ ಬಿಜೆಪಿ ಬೂತ್ ಅಧ್ಯಕ್ಷ ಬಿಜಯ್ಕೃಷ್ಣ ಭುನಿಯಾ ಸೋಮವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಪತ್ನಿಯನ್ನು ಟಿಎಂಸಿ ಪುಂಡರು ಥಳಿಸಿ ಬಲವಂತವಾಗಿ ಬೈಕ್ನಲ್ಲಿ ಕರೆದೊಯ್ದಿದ್ದಾರೆ ಎಂದು ಬಿಜೆಪಿ ಹೇಳಿದೆ.
ಮೇ 2, 2021 ರಂದು ಟಿಎಂಸಿ ಅಧಿಕಾರಕ್ಕೆ ಬಂದ ನಂತರ ಬಂಗಾಳದಲ್ಲಿ ಹಿಂಸಾಚಾರ ತಲೆಎತ್ತಿದ್ದು, ಈಗ ಪಕ್ಷವು ತನ್ನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುವ ಸಮಯದಲ್ಲಿ ಬಿಜೆಪಿ ನಾಯಕ ಬಿಜಯ್ ಕೃಷ್ಣ ಭುನಿಯಾ ಅವರ ಹತ್ಯೆ ಜನರಿಗೆ ಉಡುಗೊರೆಯಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಹತ್ಯೆಯನ್ನು ವಿರೋಧಿಸಿ ಬಿಜೆಪಿ 12 ಗಂಟೆಗಳ ಬಂದ್ಗೆ ಕರೆ ನೀಡಿದೆ. ಘಟನೆ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಆರೋಪಕ್ಕೆ ಟಿಎಂಸಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ. ಅವರ ಸಾವಿಗೆ ಕೌಟುಂಬಿಕ ಕಲಹವೇ ಕಾರಣ ಎಂದು ಟಿಎಂಸಿ ಹೇಳಿದೆ. ಭುನಿಯಾ ಅವರ ಮೃತ ದೇಹವು ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಮೇದಿನಿಪುರ ಸಂಸದ ದಿಲೀಪ್ ಘೋಷ್ ಮಾತನಾಡಿ..ರಾಜ್ಯದಲ್ಲಿ ಪಂಚಾಯತ್ ಚುನಾವಣೆ ಗೆಲ್ಲಲು ಟಿಎಂಸಿ ಇಂತಹ ಹಿಂಸಾತ್ಮಕ ಘಟನೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ವಾತಾವರಣವನ್ನು ಹಾಳು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದರು.