ರಾಜ್ಯದಲ್ಲಿ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ನಾಯಕರ ಪ್ರಚಾರ: ಯಾರ್ಯಾರು ಎಲ್ಲೆಲ್ಲಿ ಮತಬೇಟೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭಾ ಚುನಾವಣೆಗೆ ನಾಯಕರು ಭರ್ಜರಿಯಿಂದ ಪ್ರಚಾರ ಮಾಡುತ್ತಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ರಾಜಕೀಯ ನಾಯಕರು ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆ ಇಂದು ಕೂಡ ಕಾಂಗ್ರೆಸ್-ಬಿಜೆಪಿ ರಾಷ್ಟ್ರ ನಾಯಕರು ರಾಜ್ಯದಲ್ಲಿ ಮತಬೇಟೆ ಮುಂದುವರೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಸಚಿವೆ ಸ್ಮೃತಿ ಇರಾನಿ, ಅಣ್ಣಾಮಲೈ ಮತಬೇಟೆ ನಡೆಸಲಿದ್ದಾರೆ. ಜೊತೆಗೆ ನಟ ಸುದೀಪ್ ಕೂಡ ಮತಬೇಟೆಗೆ ಇಳಿದಿದ್ದಾರೆ. ಯಾವ ಯಾವ ನಾಯಕರು ಎಲ್ಲೆಲ್ಲಿ ಪ್ರಚಾರ ನಡೆಸಲಿದ್ದಾರೆಂದು ಇಲ್ಲಿ ತಿಳಿಯಿರಿ.

ಕರಾವಳಿಯಲ್ಲಿ ಪ್ರಧಾನಿ ಮೋದಿ

ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೂಡಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಯಲಿದೆ. ಮಧ್ಯಾಹ್ನ 1.15 ಕ್ಕೆ ಅಂಕೋಲಾದಲ್ಲಿ, ಮಧ್ಯಾಹ್ನ 3.15 ಕ್ಕೆ ಬೈಲಹೊಂಗಲದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಸಂಜೆ 4.40ಕ್ಕೆ ಬೆಳಗಾವಿಯಿಂದ ದೆಹಲಿಗೆ ಮೋದಿ ನಿರ್ಗಮಿಸಲಿದ್ದಾರೆ. ನಂತರ ಬಂದು ದಿನ ವಿರಾಮ ಪಡೆದು ಮತ್ತೆ ಮೇ 5, 6 ಮತ್ತು 7 ರಂದು ಮೂರು ದಿನಗಳ‌ ಕಾಲ‌ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ‌ಪ್ರಚಾರ ನಡೆಸಲಿದ್ದಾರೆ.

ರಾಮನಗರದಲ್ಲಿ ಜೆಪಿ ನಡ್ಡಾ

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 12.55ಕ್ಕೆ ರಾಮನಗರ ಕ್ಷೇತ್ರದ ಹಾರೋಹಳ್ಳಿಯಲ್ಲಿ‌ ರೋಡ್ ಶೋ ನಡೆಸಿ ಮಧ್ಯಾಹ್ನ 2.50ಕ್ಕೆ ಮಾಗಡಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಧ್ಯಾಹ್ನ 2 ಗಂಟೆಗೆ ಹುಕ್ಕೇರಿ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದು ಸಂಜೆ 4 ಗಂಟೆಗೆ ಕಾಗವಾಡ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಸಚಿವೆ ಸ್ಮೃತಿ ಇರಾನಿ, ಅಣ್ಣಾಮಲೈ ಪ್ರಚಾರ

ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಚುನಾವಣಾ ‌ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಸೋಸಿಯೇಷನ್ ಸಭೆ ನಡೆಸಿ ರಾತ್ರಿ‌ 7 ಗಂಟೆಗೆ ಜಯನಗರದಲ್ಲಿ ಮಹಿಳಾ ಉದ್ಯಮಿಗಳ ಜೊತೆ ಸಭೆ ನಡೆಸಲಿದ್ದಾರೆ. ಹಾಗೂ ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಬೆಂಗಳೂರಿನಲ್ಲಿ ಮತಯಾಚನೆ ಮಾಡಲಿದ್ದಾರೆ. ಬೆಳಗ್ಗೆ 9.30 ಕ್ಕೆ ಶಾಂತಿನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಬೆಳಗ್ಗೆ 10.30.ಕ್ಕೆ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ರಾತ್ರಿ 7 ಗಂಟೆಗೆ ಗಾಂಧಿನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಯಲಿದೆ. ಜೊತೆಗೆ ಯಾದಗಿರಿ ಜಿಲ್ಲೆಯಲ್ಲಿ ಕೇಂದ್ರ ‌ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಮಧ್ಯಾಹ್ನ 2.30 ಕ್ಕೆ ಗುರುಮಿಠಕಲ್ ಕ್ಷೇತ್ರದಲ್ಲಿ ಕೋಲಿ ಸಮಾಜದ ಜೊತೆ ಸಭೆ, ರೋಡ್ ಶೋ ನಡೆಸಲಿದ್ದಾರೆ.

ಬೀದರ್​​, ಯಾದಗಿರಿಯಲ್ಲಿ ಯಡಿಯೂರಪ್ಪ ಪ್ರಚಾರ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಬೆಳಗ್ಗೆ 10.45ಕ್ಕೆ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12.25ಕ್ಕೆ ಔರಾದ್ ಕ್ಷೇತ್ರದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿ ಮಧ್ಯಾಹ್ನ 3.20ಕ್ಕೆ ಶಹಾಪುರ ಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ. ಸಂಜೆ 5 ಗಂಟೆಗೆ ಗುರುಮಿಠಕಲ್ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ನಟ ಸುದೀಪ್

ರಾಯಚೂರು, ಯಾದಗಿರಿ ಸೇರಿ ಎರಡೂ ಜಿಲ್ಲೆಗಳ ವಿವಿಧೆಡೆ ನಟ ಸುದೀಪ್ ರೋಡ್​ಶೋ ನಡೆಸಲಿದ್ದಾರೆ. ಬೆಳಗ್ಗೆ 9.30ಕ್ಕೆ ರಾಯಚೂರು ಜಿಲ್ಲೆ ಲಿಂಗಸುಗೂರು ಕ್ಷೇತ್ರದಲ್ಲಿ ರೋಡ್​ಶೋ ನಡೆಸೆ ಬೆಳಗ್ಗೆ 11.30ಕ್ಕೆ ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 2.40ಕ್ಕೆ ಶಹಾಪುರ ಕ್ಷೇತ್ರದಲ್ಲಿ ರೋಡ್​ಶೋ ನಡೆಸಿ ಸಂಜೆ 4.30ಕ್ಕೆ ಯಾದಗಿರಿ ಕ್ಷೇತ್ರದಲ್ಲಿ ರೋಡ್​ಶೋ ಮಾಡಲಿದ್ದಾರೆ.

ಕಲಬುರಗಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪ್ರಿಯಾಂಕಾ ಗಾಂಧಿ

ಇಂದು ಕೂಡ ಪ್ರಿಯಾಂಕಾ ಗಾಂಧಿ ಮತಬೇಟೆ ಮುಂದುವರಿದಿದ್ದು ಕಲಬುರಗಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 8.30ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣಿಸಿ ಬಳಿಕ ಬೆಳಗ್ಗೆ 11.30ಕ್ಕೆ ಕಲಬುರಗಿಯಿಂದ ಇಂಡಿ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ನಂತರ ಪ್ರಿಯಾಂಕಾ ಗಾಂಧಿ ಮಧ್ಯಾಹ್ನ ಕಲಬುರಗಿಗೆ ತೆರಳಿ ಮಧ್ಯಾಹ್ನ 3.30ಕ್ಕೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ಬೀದರ್‌ನಲ್ಲಿ ಪ್ರಚಾರ ನಡೆಸಿ ರಾತ್ರಿ ಬೀದರ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೈಸೂರಿನಲ್ಲಿ ಡಿ.ಕೆ ಶಿವಕುಮಾರ್

ಇಂದು ಮೈಸೂರಿಗೆ ಡಿಕೆ ಶಿವಕುಮಾರ್ ಆಗಮಿಸಲಿದ್ದು, ನಂಜನಗೂಡು ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಂಜನಗೂಡು ಕ್ಷೇತ್ರದ ಕೈ ಅಭ್ಯರ್ಥಿ, ದಿ.ಧ್ರುವನಾರಾಯಣ್ ಪುತ್ರ ದರ್ಶನ್ ಪರ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ಸಂಜೆ 6 ಗಂಟೆಗೆ ಮೈಸೂರು ನಗರದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಬಳಿಕ ಚಾಮರಾಜ ಕ್ಷೇತ್ರದ ಕೈ ಅಭ್ಯರ್ಥಿ ಹರೀಶ್ ಗೌಡ ಪರ‌ ಮತಯಾಚನೆ ಮಾಡಲಿದ್ದಾರೆ.

ಚನ್ನಪಟ್ಟಣದಲ್ಲಿ ಹೆಚ್​​.ಡಿ.ದೇವೇಗೌಡ

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್​​.ಡಿ.ದೇವೇಗೌಡ ಪ್ರಚಾರ ನಡೆಸಲಿದ್ದಾರೆ. ಪುತ್ರ ಹೆಚ್​​ಡಿಕೆ ಪರ ಮತಯಾಚಿಸಲಿದ್ದಾರೆ. ಚನ್ನಪಟ್ಟಣ ನಗರದ ಶೇರ್ವಾ ಸರ್ಕಲ್ ಹಾಗೂ ಮಂಗಳವಾರಪೇಟೆ ಬಳಿ ಬಹಿರಂಗ ಸಭೆ ನಡೆಸಲಿದ್ದಾರೆ. ಮಾಜಿ ಪ್ರಧಾನಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ‌ಸಿಎಂ ಇಬ್ರಾಹಿಂ ಸಾಥ್ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!