ಹೊಸದಿಗಂತ ವರದಿ, ಮೈಸೂರು :
ನಗರದ ಟೌನ್ ಹಾಲ್ನಲ್ಲಿ ಇತ್ತೀಚೆಗೆ ಮಹಿಷ ಉತ್ಸವ ಸಮಿತಿಯವರು ಆಯೋಜಿಸಿದ್ದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗರನ್ನು ಸಂಸ್ಕೃತಿ ಹೀನರೆಂದು ಅವಹೇಳನ ಮಾಡಿ ನಿಂದಿಸಿರುವ ಪ್ರೊ.ಕೆ.ಎಸ್.ಭಗವಾನ್ರನ್ನು ಕೂಡಲೇ ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ನಟ, ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್(ಜೆಪಿ) ಆಗ್ರಹಿಸಿದ್ದಾರೆ.
ಪ್ರೊ.ಕೆ.ಎಸ್.ಭಗವಾನ್ರು ಒಂದಲ್ಲ, ಒಂದು ವಿವಾದತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ಕದುಡುವ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಮರ್ಯಾದ ಪುರುಷೋತ್ತ ಶ್ರೀರಾಮನನ್ನು ಹಲವಾರು ಬಾರಿ ನಿಂದಿಸಿ, ಸಮಾಜದಲ್ಲಿ ಅಶಾಂತಿಯನ್ನುoಟು ಮಾಡಿದ್ದರು. ಈಗಾಗಲೇ ಅವರ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ಗಳು ದಾಖಲಾಗಿವೆ.
ಹೀಗಿದ್ದರೂ ಬುದ್ಧಿ ಕಲಿಯದ ಪ್ರೊ.ಕೆ.ಎಸ್.ಭಗವಾನ್ ಇದೀಗ ಒಕ್ಕಲಿಗ ಸಮುದಾಯವನ್ನೇ ನಿಂದಿಸುವ ಮೂಲಕ ಸಮಾಜದಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಠಿಸಿದ್ದಾರೆ. ಮಹಿಷ ಉತ್ಸವದಲ್ಲಿ ಯಾರನ್ನೂ ಹಾಗೂ ಯಾವ ಸಮುದಾಯವನ್ನೂ ನಿಂದಿಸಬಾರದೆoದು ಮೈಸೂರು ನಗರ ಪೊಲೀಸ್ ಆಯುಕ್ತರು ಷರತ್ತು ಹಾಕಿದ್ದರು. ಅದನ್ನು ಉಲ್ಲಂಘಿಸಿರುವ ಪ್ರೊ.ಕೆ.ಎಸ್.ಭಗವಾನ್ರ ವಿರುದ್ಧ ನಗರ ಪೊಲೀಸ್ ಆಯುಕ್ತರು ಇನ್ನೂ ಕ್ರಮಕೈಗೊಳ್ಳದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಈಗಲಾದರೂ ನಗರ ಪೊಲೀಸರು ಎಚ್ಚೆತ್ತುಕೊಂಡು, ಕೂಡಲೇ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕೆ.ಎಸ್.ಭಗವಾನ್ರನ್ನು ಬಂಧಿಸಿ, ಇಡೀ ರಾಜ್ಯದಿಂದ ಒಂದಷ್ಟು ವರ್ಷಗಳ ಕಾಲ ಗಡಿಪಾರು ಮಾಡಬೇಕು. ಆ ಮೂಲಕ ಸಾಂಸ್ಕೃತಿಕ ನಗರಿ ಎಂದು ಹೆಸರಾಗಿರುವ ಮೈಸೂರು ನಗರದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.