ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲು ಒಮ್ಮತದ ಬೆಂಬಲ ಸಿಗದ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಸಚಿವೆ ರಕ್ಷಾ ಖಾಡ್ಸೆ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷದ ವಿರುದ್ಧ ಗುಡುಗಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಇದರಿಂದ ಮಹಿಳಾ ಸಬಲೀಕರಣದ ಕಡೆಗೆ ಕಾಂಗ್ರೆಸ್ ನ ನಿಜವಾದ ಮನಸ್ಥಿತಿಯನ್ನು ಬಹಿರಂಗವಾಗಿದೆ. ದೇಶದ ಮಹಿಳೆಯರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದಾರೆ. ನಾರಿ ಶಕ್ತಿಗೆ ಮಾಡಿದ ಈ ಅನ್ಯಾಯಕ್ಕೆ ಉತ್ತರ ಸಿಕ್ಕೇ ಸಿಗಲಿದೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಬನ್ಸುರಿ ಸ್ವರಾಜ್, ರಾಹುಲ್ ಗಾಂಧಿ ಮತ್ತು ಅವರ ಮಿತ್ರಪಕ್ಷಗಳಿಗೆ ಮಹಿಳೆಯರು ಕೇವಲ ಮತಬ್ಯಾಂಕ್ . ಯಾವಾಗ ಮಹಿಳೆಯರಿಗೆ ಅಧಿಕಾರ ಹಂಚಿಕೆ ಮಾಡುವ ಸಂದರ್ಭ ಬರುತ್ತದೆಯೋ ಅಂದು ಕಾಂಗ್ರೆಸ್ ಮತ್ತು ಅದರ ಸಹೋದ್ಯೋಗಿಗಳು ಹಿಂದೆ ಸರಿಯುತ್ತಾರೆ ಎಂದು ಟೀಕಿಸಿದರು.
ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ಸುಟ್ಟುಹಾಕಲಾಯಿತು. ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಹತ್ತಿ, ಘೋಷಣೆಗಳನ್ನು ಕೂಗಿದ್ದು,ಪೊಲೀಸರು ಜಲಫಿರಂಗಿಗಳನ್ನು ಬಳಸಿದರು. ಈ ವೇಳೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಬನ್ಸುರಿ ಸ್ವರಾಜ್ ಮತ್ತು ಕಮಲ್ಜೀತ್ ಸೆಹ್ರಾವತ್ ಸೇರಿದಂತೆ ಹಲವು ನಾಯಕರನ್ನು ವಶಕೆ ಪಡೆದುಕೊಂಡರು.



