ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ರಾಜಕೀಯ ದಿನದಿಂದ ದಿನಕ್ಕೆ ಆಸಕ್ತಿಕರವಾಗಿ ಬದಲಾವಣೆಯಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದರೆ, ಟಿಆರ್ಎಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದು ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ತೆಲಂಗಾಣದತ್ತ ವಿಶೇಷ ಗಮನ ಹರಿಸಿದ್ದಾರೆ. ಪ್ರಮುಖ ನಾಯಕರು, ಸೆಲೆಬ್ರಿಟಿಗಳು, ಸಿನಿಮಾ ನಾಯಕರ ಜತೆ ಸಭೆ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ-ಎನ್ಟಿಆರ್ ಭೇಟಿಯಾಗಿದ್ದು ಗೊತ್ತೇ ಇದೆ. ನಿನ್ನೆ ವಾರಂಗಲ್ನಲ್ಲಿ ನಡೆದ ಬಂಡಿ ಸಂಜಯ್ ಪ್ರಜಾ ಸಂಗ್ರಾಮ ಯಾತ್ರೆಯ ಸಮಾರೋಪ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ನಂತರ ನಾಯಕ ನಟ ನಿತಿನ್ ಅವರನ್ನು ಭೇಟಿಯಾದರು. ಶನಿವಾರ ರಾತ್ರಿ ಹೈದರಾಬಾದ್ನ ನೊವಾಟೆಲ್ ಹೋಟೆಲ್ಗೆ ತೆಲುಗು ರಾಜ್ಯಗಳ ಚಿತ್ರರಂಗದ ಗಣ್ಯರು ಮತ್ತು ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು.
ಇದಕ್ಕೂ ಮೊದಲು, ಜೆಪಿ ನಡ್ಡಾ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಭೇಟಿಯಾದರು. ಹೈದರಾಬಾದ್ನಿಂದ ಹನ್ಮಕೊಂಡದ ಬಹಿರಂಗ ಸಭೆಗೆ ತೆರಳಿದ ಜೆ.ಪಿ.ನಡ್ಡಾ ಅವರು ಕಾಕತೀಯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕುರಪತಿ ವೆಂಕಟನಾರಾಯಣ ಅವರನ್ನು ಭೇಟಿ ಮಾಡಿ, ಚಹಾ ಸೇವಿಸುತ್ತಾ ತೆಲಂಗಾಣ ರಾಜಕೀಯ ಬಗ್ಗೆ ತಿಳಿದುಕೊಂಡರು.
ಬಳಿಕ ವರಂಗಲ್ನಿಂದ ಶಂಶಾಬಾದ್ ನೊವಾಟೆಲ್ನಲ್ಲಿ ಟಾಲಿವುಡ್ ಹೀರೋ ನಿತೀಶ್ ಅವರನ್ನು ಭೇಟಿಯಾಗಿದ್ದಾರೆ. ಏಕಾಏಕಿ ಹೀರೋ ನಿತಿನ್ ಬಿಜೆಪಿ ಸಂಪರ್ಕಕ್ಕೆ ಬರುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಮುಂಬರುವ ಚುನಾವಣೆ ವೇಳೆಗೆ ಬಿಜೆಪಿಗೆ ಒತ್ತಾಸೆಯಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಗ್ಲಾಮರ್ ಹೆಚ್ಚಿಸುವ ತಂತ್ರವಾಗಿ ಹೆಜ್ಜೆ ಇಡಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ನಿತಿನ್ ಹೊಸ ಸಿನಿಮಾ ʻಮಾಚರ್ಲ ನಿಯೋಜಕವರ್ಗಂʼ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರ ನಡುವೆ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ ಎಂದು ಅಲ್ಲಿನ ಮಾಧ್ಯಮಗಳು ಬಿತ್ತರಿಸಿವೆ.