ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡಿನಲ್ಲಿ ಶನಿವಾರ ಸಿಪಿಎಂ ಆಯೋಜಿಸಿದ್ದ ಸಿಎಎ ವಿರೋಧಿ ಆಂದೋಲನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕುರಿತಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಕೇಂದ್ರ ಸರ್ಕಾರ, ಆರೆಸ್ಸೆಸ್ ವಿರುದ್ಧದ ಟೀಕೆಗಳ ವಿರುದ್ಧ ಕೇರಳ ಬಿಜೆಪಿ ಗುಡುಗಿದ್ದು, ಈ ಆರೋಪಗಳಿಗೆ ಆಧಾರವೇನು ಎಂದು ಪ್ರಶ್ನಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್, ಕೋಮು ವಿಭಜನೆ ಉದ್ದೇಶದಿಂದಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂತಹಾ ಹೇಳಿಕೆ ನೀಡುತ್ತಿದ್ದಾರೆ. ಸಿಎಎ ಹೆಸರಿನಡಿ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸುವ ಮೂಲಕ ಕೋಮು ಧ್ರುವೀಕರಣ ಪಿಣರಾಯಿ ಅವರ ಉದ್ದೇಶವಾಗಿದೆ.
ನಿರ್ದಿಷ್ಟ ಸಮುದಾಯವೊಂದು ಈ ಹಿಂದೆ ಸಿಎಎ ವಿರೋಧಿಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿ, ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದೀಗ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಎಡಪಕ್ಷ ನೇತೃತ್ವದ ಕೇರಳ ಸರ್ಕಾರ ಹೇಳುತ್ತಿದೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.