ಹೊಸದಿಗಂತ ವರದಿ, ಶಿವಮೊಗ್ಗ:
ಪ್ರಧಾನಿ ಮೋದಿ ಪ್ರಯಾಣಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ನಗರ ಬಿಜೆಪಿ ಸಮಿತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ಮೋದಿ ತೆರಳುವ ರಸ್ತೆಯ ಇನ್ನೊಂದು ಬದಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿತ್ತು. ಇದರಿಂದ ವಿಚಲಿತರಾದ ಪ್ರಧಾನ ಮಂತ್ರಿಯವರ ಬೆಂಗಾವಲು ಪಡೆ ಆತಂಕಗೊಂಡು ಪಂಜಾಬ್ ಸರ್ಕಾರದ ಮುಖ್ಯಮಂತ್ರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ದೊರೆಯಲಿಲ್ಲ. ಆ ರಾಜ್ಯದ ಭದ್ರತಾ ಅಧಿಕಾರಿಗಳು ಕೂಡ ಸಂಪರ್ಕಕ್ಕೆ ಸಿಗಲಿಲ್ಲ. ಇದು ಪ್ರಧಾನ ಮಂತ್ರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ದೂರಿದರು.
ಅತ್ಯಂತ ದುರದೃಷ್ಟಕರ ಎಂದರೆ ಘಟನಾ ಸ್ಥಳದಿಂದ ಪಾಕಿಸ್ತಾನ ಗಡಿಗೆ ಕೇವಲ 10 ಕಿ.ಮೀ. ದೂರವಿದೆ. ಪ್ರಧಾನಮಂತ್ರಿಯವರ ಹತ್ಯೆಗೆ ಪಾಕಿಸ್ತಾನ, ಖಲಿಸ್ಥಾನದ ಭಯೋತ್ಪಾದಕರು ಏಕೆ ಪ್ರಯತ್ನಿಸಿರಬಾರದು. ಪಂಜಾಬ್ ನ ಕಾಂಗ್ರೆಸ್ ಸರ್ಕಾರ ಈ ಸಂಚನ್ನು ರೂಪಿಸಿತ್ತೇ ಎಂಬ ಶಂಕೆ ಭಾರತದ ಎಲ್ಲಾ ಪ್ರಜೆಗಳಿಗೆ ಮೂಡಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ರಾಷ್ಟ್ರದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಡೀ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.