ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ನಮಗೆ ಪ್ರಧಾನಿ ಮೋದಿಯವರ ನಾಮಬಲ ಇದೆ ಹಾಗೂ ಪಕ್ಷದ ಸಂಘಟನೆಯ ಬಲವಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಮುಂದುವರೆಸಿಕೊಂಡು ಹೋದರೆ, ನಿರೂಪಣೆ ಮತ್ತು ಕಾರ್ಯಸೂಚಿಯನ್ನು ಸಿದ್ಧಪಡಿಸಿ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಮತ್ತೆ ತನ್ನ ಸ್ವಂತ ಶಕ್ತಿ ಆಧಾರದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಂಚ ರಾಜ್ಯಗಳ ಚುನಾವಣಾ ಉಸ್ತುವಾರಿಗಳಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, 2023ರ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ವಿಶ್ವಾಸವಿದೆ ಎಂದರು.
ಪಕ್ಷದ ಕಾರ್ಯಕ್ರಮಗಳನ್ನು ಹಾಗೂ ಸಿದ್ಧಾಂತಗಳನ್ನು ತೆಗೆದುಕೊಂಡು ಹೋಗುವುದು ನಮ್ಮ ಪಾಲಿಗೆ ಬಂದಿದೆ. ಒಗ್ಗಟ್ಟು ಮತ್ತು ಶ್ರಮದ ಮಂತ್ರ ನಮಗೆ ಅಗತ್ಯ. ಪಕ್ಷಕ್ಕೆ ಸಮಯವನ್ನು ಕೊಟ್ಟರೆ ಇದು ಸಾಧ್ಯವಿದೆ. ಅದಕ್ಕಾಗಿ 24×7 ಕಾರ್ಯನಿರ್ವಹಿಸಲು ನಾನು ಸಿದ್ಧ. ಸರಕಾರ ಮತ್ತು ಪಕ್ಷ ಎರಡು ಕಣ್ಣುಗಳಿದ್ದಂತೆ. ಅವುಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಮೂಲೆ ಮೂಲೆಗಳನ್ನು ಸುತ್ತಿ, ಬಿಜೆಪಿಯ ಅಸ್ತಿತ್ವವಿಲ್ಲದೆಡೆಗಳಲ್ಲಿ ಪಕ್ಷವನ್ನು ಗೆಲ್ಲಿಸುತ್ತೇವೆ. ಎಲ್ಲಿ ಗೆದ್ದಿದ್ದೇವೆ, ಅವುಗಳನ್ನು ಉಳಿಸಿಕೊಂಡು ಹೋಗಬೇಕು. ಅತ್ಯಂತ ವ್ಯವಸ್ಥಿತ, ಯೋಜನಾಬದ್ಧ ಚುನಾವಣೆಯನ್ನು ನಾವೆಲ್ಲರೂ ಸೇರಿ ಎದುರಿಸೋಣ ಎಂದರು.
ಕಷ್ಟ ಕಾಲದಲ್ಲಿ ನಮ್ಮ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬ ಅರಿವಿದೆ. ಕಳೆದ ಬಾರಿ ನಾವು ಚುನಾವಣೆಯಲ್ಲಿ ಗೆಲ್ಲಬೇಕಿತ್ತು. ಆದರೆ ಆಗಲಿಲ್ಲ. ಏನೇ ಆಗಲಿ ಈ ಬಾರಿ ಅದರಿಂದ ನಾವು ಪಾಠವನ್ನು ಕಲಿತಿದ್ದೇವೆ. 2023ರಲ್ಲಿ ವಿಧಾನಸೌಧದ 3ನೇ ಮಹಡಿಯಲ್ಲಿ ಕಮಲವೇ ಅರಳಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಅನುಭವವನ್ನು ಕರ್ನಾಟಕಕ್ಕೆ ಹೇಗೆ ಅಳವಡಿಸಬೇಕೋ ಅದನ್ನು ಮಾಡುತ್ತೇವೆ. ನಿತ್ಯ ನಿರಂತರ ಸಂಪರ್ಕವನ್ನು ಪಕ್ಷದ ಜೊತೆ, ಕಾರ್ಯಕರ್ತರೊಂದಿಗೆ, ನಾನು, ಮಂತ್ರಿಮಂಡಲ ಹಾಗೂ ಶಾಸಕ ಮಿತ್ರರೆಲ್ಲರೂ ಸೇರಿ ಮಾಡುತ್ತೇವೆ. ಒಟ್ಟಾಗಿ ಮುನ್ನೆಡೆಯೋಣ, ಜಯ ನಮ್ಮದು ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ವಿ. ಸೋಮಣ್ಣ, ಮುನಿರತ್ನ, ಸಂಸದ ಪಿ.ಸಿ. ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಲ್ ಕುಮಾರ್ ಸುರಾಣಾ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.