ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ನಡೆದ ಪ್ರಮುಖ ಜೆಡಿಯು ಸಮಾವೇಶವೊಂದರಲ್ಲಿ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಿದ್ದಾರೆ.
“ಎಲ್ಲ (ವಿರೋಧ) ಪಕ್ಷಗಳು ಒಟ್ಟಾಗಿ ಹೋರಾಡಿದರೆ, ಬಿಜೆಪಿಯು ಸುಮಾರು 50 ಸ್ಥಾನಗಳಿಗೆ ಕುಸಿಯುತ್ತದೆ. ನಾನು ಆ ಅಭಿಯಾನಕ್ಕೆ ನನ್ನನ್ನು ಮೀಸಲಿಡುತ್ತಿದ್ದೇನೆ” ಎಂದು ನಿತೀಶ್ ಕುಮಾರ್ ತಮ್ಮ ಪಕ್ಷದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಾರೆ. ಈ ಹೇಳಿಕೆಗೆ ಪೂರಕವಾಗಿ ಸೆಪ್ಟೆಂಬರ್ 5ರಂದು ನಿತೀಶ್ ಕುಮಾರ್ ದೆಹಲಿ ಪ್ರವಾಸ ಮಾಡಲಿದ್ದು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಎಲ್ಲಾ ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆ.
ಮೂಲಗಳ ವರದಿಯ ಪ್ರಕಾರ ನಿತೀಶ್ ಕುಮಾರ್ ಪ್ರಧಾನಿ ಆಕಾಂಕ್ಷಿಯಲ್ಲ, ಬದಲಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುವುದು ಅವರ ಏಕೈಕ ಗುರಿಯಾಗಿದೆ ಎನ್ನಲಾಗಿದೆ.
ಇನ್ನು ಮಣಿಪುರದಲ್ಲಿ ಆರರಲ್ಲಿ ಐವರು ಶಾಸಕರು ಬಿಜೆಪಿ ಪಾಳಯಕ್ಕೆ ಸೇರಿಕೊಂಡಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು “ಇದು ಸರಿಯಾಗಿದೆಯೇ? ಇದು ಸಾಂವಿಧಾನಿಕವೇ? ಇದು ಸ್ಥಾಪಿತ ಮಾನದಂಡಗಳಿಗೆ ಅನುಗುಣವಾಗಿದೆಯೇ? ಅವರು (ಬಿಜೆಪಿಯವರು) ಎಲ್ಲಾ ಕಡೆ ಹಾಗೆ ಮಾಡುತ್ತಿದ್ದಾರೆ. ಆದ್ದರಿಂದ ಸಕಾರಾತ್ಮಕ ಜನಾದೇಶಕ್ಕಾಗಿ 2024 ರಲ್ಲಿ ಎಲ್ಲಾ ಪಕ್ಷಗಳು ಒಂದಾಗಬೇಕು” ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.