ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಬಿಜೆಪಿ ಅವದಿಯಲ್ಲಿ ರಾಮಮಂದಿರ ಆಗುತ್ತಿದೆ ಎಂಬ ಕಾರಣಕ್ಕೆ ಯುಪಿಎ ಒಕ್ಕೂಟ ಹೊಟ್ಟೆ ಕಿಚ್ಚಿನಿಂದ ಹೀಗೇ ಮಾತನಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಯುಪಿಎ ಮತ ಬ್ಯಾಂಕ್ಗಾಗಿ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದರು. ರಾಮ ಕಾಲ್ಪನಿಕ ಎಂಬ ಹೇಳಿಕೆ ಸೋನಿಯಾ ಗಾಂ ನೀಡಿದ್ದರು. ಮಾಜಿ ಸಚಿವ ಕಪಿಲ್ ಸಿಂಬಲ್ ರಾಮಮಂದಿರ ವಿಚಾರದಲ್ಲಿ ಅನೇಕ ಬಾರಿ ವಿರೋಧ ವ್ಯಕ್ತಪಡಿಸಿರುವ ಅನೇಕ ಉದಾಹರಣೆಗಳಿವೆ ಎಂದರು.
ಅಷ್ಟಾದರೂ ರಾಮ ಮಂದಿರ ಸಮಿತಿಯು ಯುಪಿಎ ನಾಯಕರಿಗೆ ಸಮಾರಂಭಕ್ಕೆ ಆಹ್ವಾನ ನೀಡಿದೆ. ಬಂದರೆ ಒಳ್ಳೆಯದು. ಆದರೆ ಬಾರದೆ ಜನ ಬೈಯಲು ಮುಂದಾದರೇ ಅನವಶ್ಯಕವಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಯುಪಿಎ ನಾಯಕರಿಗೆ ಸಮಾರಂಭಕ್ಕೆ ಬಂದರೆ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳುವ ಭಯ. ಇನ್ನೊಂದು ಕಡೆ ಹಿಂದೂಗಳು ಏನೆಂದುಕೊಳ್ಳುತ್ತಾರೆ ಎಂಬ ಗೊಂದಲದಲ್ಲಿದ್ದಾರೆ. ಆದರೆ ಬಿಜೆಪಿಗೆ ಇದ್ಯಾವುದು ಇಲ್ಲ. ದೇಶದ ಎಲ್ಲ ಧರ್ಮದವರು ನಮ್ಮವರು ಎಂದು ಭಾವಿಸಿದ್ದೇವೆ. ಅವರು ತೃಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಬಹು ದೊಡ್ಡ ಮೈಲುಗಲ್ಲು: ಅಯೋಧ್ಯೆ ರಾಮಮಂದಿರ ಇಡೀ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಮೈಲುಗಲ್ಲಾಗಲಿದೆ. ಸನಾತನ ಧರ್ಮದ ಅಭಿಮಾನಿಗಳು, ಶ್ರೀರಾಮ ಚಂದ್ರನ ಭಕ್ತರು ಹೋರಾಟದ ಫಲ ಹಾಗೂ ಪ್ರಧಾನಿ ಮೋದಿ ಅವರ ಇಚ್ಛಾಶಕ್ತಿಯಿಂದ ಭವ್ಯ ರಾಮಮಂದಿರ ನಿರ್ಮಾಣವಾಗಿದೆ ಎಂದರು.
ಅಯೋಧ್ಯೆಯಲ್ಲಿ 16 ಸಾವಿರ ಕೋಟಿ ಅನುದಾನದಲ್ಲಿ ಅಭೂತ ಪೂರ್ವವಾದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದು ದೇಶದ ಪ್ರವಾಸೋದ್ಯಮದ ಸೆಂಟರ್ ಸಹ ಆಗುವಂತ ಯೋಜನೆ ರೂಪಿಸಲಾಗಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರವಾಸೋದ್ಯಮವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.