ಹೊಸದಿಗಂತ ವರದಿ, ಮುಂಡಗೋಡ:
ಬಾಚಣಕಿ ಜಲಾಶಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೇ? ಇಂತಹ ಪ್ರಶ್ನೆ ಕಾಡಲು ಕಾರಣ, ಸೋಮವಾರ ಮಧ್ಯಾಹ್ನ ಬಾಚಣಕಿ ಜಲಾಶಯದ ದಡಭಾಗದಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯ ಮೃತದೇಹ ಕಂಡುಬಂದಿದೆ.
ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ತನುಜಾ ಪಾಟೀಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮತ್ತೊಂದು ಕಡೆ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹುಡುಗನ ಚಪ್ಪಲಿಯು ದಡಭಾಗದಲ್ಲಿ ಪತ್ತೆಯಾಗಿದೆ. ಈತ ಹನುಮಾಪುರ ಗ್ರಾಮದವನೆಂದು ಮಾಹಿತಿ ಲಭ್ಯವಾಗಿದ್ದು, ಈತನ ಮೃತದೇಹದ ಶೋಧ ಕಾರ್ಯ ನಡೆದಿದೆ.
ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಇಳಿದು ದುರಂತ ಸಾವು ಕಂಡರೇ? ಪ್ರೀತಿ, ಪ್ರೇಮ ಪ್ರಕರಣವೋ? ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಜೀವ ಕಳೆದುಕೊಂಡರೇ? ಅಥವಾ, ಆಕಸ್ಮಿಕವಾಗಿ ಮುಳುಗಿ ಮೃತಪಟ್ಟರೇ? ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ.