ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಬೆಂಕಿ ಉರಿದಿದೆ. ಹಲವು ವರ್ಷಗಳಿಂದ ಅಶಾಂತಿಯಲ್ಲಿರುವ ರಾಜ್ಯದಲ್ಲಿ ಮಂಗಳವಾರ ಮುಂಜಾನೆ ನಡೆದ ಬಾಂಬ್ ದಾಳಿ ಮನಕಲಕುವ ದುರಂತಕ್ಕೆ ಕಾರಣವಾಗಿದೆ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿರುವ ಮನೆ ಒಂದರ ಮೇಲೆ ಸ್ಫೋಟಕ ಎಸೆಯಲ್ಪಟ್ಟ ಪರಿಣಾಮ ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ಕುಟುಂಬದವರು ನಿದ್ರೆಯಲ್ಲಿದ್ದಾಗ ಈ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ ಐದು ವರ್ಷದ ಬಾಲಕ ಹಾಗೂ ಆರು ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:
ಈ ಪ್ರದೇಶವು ಚುರಚಂದ್ಪುರ ಬೆಟ್ಟ ಪ್ರದೇಶಗಳ ಸಮೀಪದಲ್ಲಿದ್ದು, 2023 ಮತ್ತು 2024ರಲ್ಲಿ ಕುಕಿ ಹಾಗೂ ಮೈಥಿ ಸಮುದಾಯಗಳ ನಡುವಿನ ಸಂಘರ್ಷದ ಕೇಂದ್ರವಾಗಿತ್ತು. ಭೂಹಕ್ಕು, ರಾಜಕೀಯ ಪ್ರತಿನಿಧಿತ್ವ ಹಾಗೂ ಬುಡಕಟ್ಟು ಸ್ಥಾನಮಾನ ಕುರಿತ ವಿವಾದಗಳು ರಾಜ್ಯವನ್ನು ದೀರ್ಘಕಾಲ ಹಿಂಸಾಚಾರದ ವಲಯದಲ್ಲಿ ತಳ್ಳಿದ್ದವು. ಇತ್ತೀಚಿನ ದಾಳಿ ಮತ್ತೆ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಈ ಘಟನೆಯನ್ನು ಸ್ಥಳೀಯ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದು, ನಿರಪರಾಧ ಮಕ್ಕಳ ಜೀವ ಬಲಿಯಾದುದು ಅಮಾನವೀಯ ಕೃತ್ಯ ಎಂದು ಹೇಳಿದ್ದಾರೆ. ದಾಳಿಯ ಹಿಂದೆ ಶಂಕಿತ ಉಗ್ರರ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿವೆ.



