ಭಾರತ -ಚೀನಾ ನಡುವಿನ ಗಡಿ ಘರ್ಷಣೆ: ಮೂಲ ಕಾರಣ ಬಿಚ್ಚಿಟ್ಟ ಜೈಶಂಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಹಾಗೂ ಚೀನಾ ನಡುವಿನ ಗಡಿ ಘರ್ಷಣೆ ಕುರಿತು ಭಾರತ ವಿದೇಶಾಂಗ ಸಚಿವ ಜೈಶಂಕರ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.

1990ರ ದಶಕದಲ್ಲಿ ಮಾಡಿದ ಗಡಿ ಒಪ್ಪಂದವನ್ನು ಚೀನಾ ಪದೇ ಪದೇ ಉಲ್ಲಂಘಿಸುತ್ತಿದೆ. ಇದರಿಂದ ಭಾರತ ಹಾಗೂ ಚೀನಾ ಸಂಬಂಧ ಹದಗೆಟ್ಟಿದೆ. ಸಂಬಂಧ ಹಳಸಿರಿವುದು ಗೌಪ್ಯವಾಗಿರುವ ಮಾಹಿತಿ ಅಲ್ಲ. ಆದರೆ ಗಡಿ ಸಂಘರ್ಷ ತಪ್ಪಿಸಿ, ಶಾಂತಿ ನೆಲೆಸುವಂತೆ ಮಾಡುವ ಭಾರತದ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿದೆ. ಭಾರತ ಹಾಗೂ ಚೀನಾ ನಡುವಿನ ಗಡಿ ಒಪ್ಪಂದವನ್ನು ಉಲ್ಲಂಘಿಸುತ್ತಿರುವ ಬೀಜಿಂಗ್ ಉದ್ದೇಶಪೂರ್ವಕವಾಗಿ ಭಾರತದ ಜೊತೆಗೆ ಸಂಘರ್ಷಕ್ಕೆ ಕಾಲು ಕೆರೆದು ನಿಂತಿದೆ ಎಂದು ಜೈಶಂಕರ್ ಹೇಳಿದ್ದಾರೆ.

1993ರ ಒಪ್ಪಂದ ಪ್ರಕಾರ ನಿಷೇಧಿತ ಪ್ರದೇಶಗಳಲ್ಲಿ ಬೃಹತ್ ಸೈನ್ಯ ನಿಯೋಜಿಸುವುದನ್ನು ನಿಷೇಧ. ಆದರೆ 2020ರಲ್ಲಿ ಚೀನಾ ಭಾರಿ ಪ್ರಮಮಾಣದಲ್ಲಿ ಸೈನಿಕರ ನಿಯೋಜನೆ ಮಾಡಿದೆ. ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದಿದೆ. ಭಾರತದ ಪ್ರದೇಶಗಳ ಆಕ್ರಮಣಕ್ಕೆ ಪದೇ ಪದೇ ಯತ್ನಿಸುತ್ತಿದೆ. ನಿಷೇಧಿತ ಪ್ರದೇಶಗಳಲ್ಲಿ ಚೀನಾ ಗ್ರಾಮಗಳ ನಿರ್ಮಾಣ, ರಸ್ತೆ ಸೇರಿದಂತೆ ಇತರ ನಿರ್ಮಾಣ ಕಾರ್ಯಗಳನ್ನು ಮಾಡುತ್ತಿದೆ. ಈ ಮೂಲಕ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಚೀನಾವೇ ಒಪ್ಪಂದ ಉಲ್ಲಂಘಿಸುತ್ತಿದೆ. ಗಲ್ವಾನ್ ಘರ್ಷಣೆ ಬಳಿಕ ಹಲವು ಸುತ್ತಿನ ಕಮಾಂಡರ್ ಮಾತುಕತೆ ನಡೆದಿದೆ. ಆದರೆ ಪ್ರತಿ ಮಾತುಕತೆಯಲ್ಲಿ ಚೀನಾ ತದ್ವಿರುದ್ದ ಹೇಳಿಕೆಗಳನ್ನೇ ನೀಡುತ್ತಿದೆ. ಈ ಮೂಲಕ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ನಿರಾಕರಿಸುತ್ತಲೇ ಬಂದಿದೆ.

ಲಡಾಖ್‌ ಪ್ರಾಂತ್ಯದಲ್ಲಿ ಭಾರತೀಯ ವಾಯುಸೀಮೆಯೊಳಗೆ ಯಾವುದೇ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಭಾರತೀಯ ವಾಯುಪಡೆ ಹಿರಿಯ ಅಧಿಕಾರಿಗಳು ಚೀನಾದೊಂದಿಗೆ ಸೇನಾ ಮಾತುಕತೆ ನಡೆಸಿದೆ. ಆದರೆ ಈ ಮಾತುಕತೆಯಲ್ಲಿ ತಲೆದೂಗಿಸಿರುವ ಚೀನಾ ಮತ್ತೆ ಉಲ್ಲಂಘನೆ ಮಾಡುತ್ತಿರುವುದು ವರದಿಯಾಗಿದೆ. ಇತ್ತೀಚೆಗೆ ಚೀನಾದ ಯುದ್ಧವಿಮಾನ ವಾಸ್ತವಿಕ ಗಡಿ ರೇಖೆ ವ್ಯಾಪ್ತಿಯ 10 ಕಿ.ಮೀ. ಅಂತರದಲ್ಲಿ ಪ್ರಯಾಣ ಮಾಡಿದ ಬೆನ್ನಲ್ಲೇ ವಾಯುಪಡೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಒಪ್ಪಂದದ ಪ್ರಕಾರ 10 ಕಿ.ಮೀ. ವ್ಯಾಪ್ತಿಯಲ್ಲಿ ವಿಮಾನ ಹಾರಿಸುವಂತಿಲ್ಲ. ಇಂತಹ ಘಟನೆಗಳ ಮರುಕಳಿಸುವಿಕೆಯನ್ನು ತಡೆಗಟ್ಟಲು ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಾಡಾಖ್‌ ಗಡಿ ವಿವಾದವನ್ನು ಶೀಘ್ರ ಇತ್ಯರ್ಥ ಪಡಿಸಬೇಕು, ಇದಕ್ಕಾಗಿ ಪರಸ್ಪರ ಗೌರವಯುತ ವಾತಾವರಣದಲ್ಲಿ ಮಾತುಕತೆ ನಡೆಯಬೇಕು. ಬಾಲಿಯಲ್ಲಿ ಜಿ 20 ದೇಶಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸಿದ ಜೈ ಶಂಕರ್‌ ಚೀನಾದ ಯಿ ಜೊತೆ ಮಾತುಕತೆ ನಡೆಸಿದ್ದು, ಭಾರತ ಚೀನಾದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಪರಸ್ಪರ ಗೌರವ, ಪರಸ್ಪರ ಸಂವೇದನೆ ಹಾಗೂ ಪರಸ್ಪರ ಹಿತಾಸಕ್ತಿಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದಿದ್ದಾರೆ. ಅಲ್ಲದೇ ಶಾಂತಿಯನ್ನು ಮರುಸ್ಥಾಪಿಸಲು ಚೀನಾ ಸೇನೆಯನ್ನು ಪೂರ್ವ ಲಡಾಖ್‌ ಗಡಿಭಾಗದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಪುನರುಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!