ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಜೊತೆ ದರುಶನಕ್ಕೆ ತೆರಳಿದ್ದ ಬಾಲಕನನ್ನು ಹುಲಿ ಕೊಂದು ಹಾಕಿದೆ. ಈ ಬಾಲಕನ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅರಣ್ಯ ಇಲಾಖೆಯ ಕಡೆಯಿಂದ ೨೦ ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.
ತಾಯಿಯ ಕೈ ಹಿಡಿದು ಹೋಗುತ್ತಿದ್ದ ಬಾಲಕನ ಮೇಲೆ ಎರಗಿದ ಹುಲಿ ಕ್ಷಣಾರ್ಧದಲ್ಲಿ ಆತನನ್ನು ಕೊಂದು ಮುಗಿಸಿತ್ತು. ಮಗನನ್ನು ಕಳೆದುಕೊಂಡ ತಾಯಿಯ ಹೃದಯಕ್ಕೆ ಆಘಾತವಾಗಿದೆ.
ಇನ್ನೂ ಜೀವನ ಕಾಣಬೇಕಿದ್ದ, ಕಣ್ಣಿನಲ್ಲಿ ಕನಸು ಹೊತ್ತು ಸಾಗಿದ್ದ ಹತ್ತು ವರ್ಷದ ಹರ್ಷಿತ್ ಗೌಡ ಮೃತದೇಹವನ್ನು ಚಾಮರಾಜನಗರದಿಂದ ಬೆಂಗಳೂರಿಗೆ ತರಲಾಗಿದೆ. ಹರ್ಷಿತ್ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಸುಮ್ಮನಹಳ್ಳಿಯ ಚಿತಾರಾಗಾರದಲ್ಲಿ ಹರ್ಷಿತ್ ಅಂತ್ಯಸಂಸ್ಕಾರ ನಡೆದಿದ್ದು, ಪೋಷಕರು, ಕುಟುಂಬದವರು ಕಣ್ಣೀರಿಟ್ಟಿದ್ದಾರೆ.



