ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ರಕ್ತದೊತ್ತಡ ಪರೀಕ್ಷೆ ನಡೆಸಿ ಸರಳತೆ ಮೆರೆದಿದ್ದಾರೆ.
ತಮ್ಮ ಕಾರಿನಲ್ಲಿ ರಸ್ತೆ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಚಿವರು ದಾರಿ ಮಧ್ಯೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತೆರಳಿ,ಜನಸಾಮಾನ್ಯರಂತೆ ಸಾಲಿನಲ್ಲಿ ನಿಂತು ವೈದ್ಯರಲ್ಲಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಂಡರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ ಅವರು ಕಚೇರಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸಿದರೂ, ಅವರ ವಿನಂತಿಯನ್ನು ನಯವಾಗಿ ನಿರಾಕರಿಸಿ , ರೋಗಿಗಳ ಜೊತೆಗೇ ಪರೀಕ್ಷೆ ಮಾಡಿಸಿಕೊಂಡು ,ಸರಳತೆ ಮೆರೆದರು.
ತುರ್ತಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮೀಟಿಂಗ್ ನಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಾರಿಯಲ್ಲಿ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ದಾರಿ ಮಧ್ಯೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರು.
ಕೆಲ ದಿನಗಳಿಂದ ಕಾರ್ಯಕ್ರಮದ ಒತ್ತಡ ಹಾಗೂ ಸರಿಯಾಗಿ ನಿದ್ರೆಯಿಲ್ಲದ ಕಾರಣ ಸಚಿವರಿಗೆ ತಲೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.ವೈದ್ಯರು ಪರೀಕ್ಷೆ ನಡೆಸಿ ರಕ್ತದೊತ್ತಡ ನಾರ್ಮಲ್ ಎಂದು ತಿಳಿಸಿದ್ದಾರೆ.