ಹೊಸದಿಗಂತ ವರದಿ, ವಿಜಯನಗರ:
ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿಯಲ್ಲಿ ಮಂಗಳವಾರ ನೆರವೇರಿದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ, ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಲಕ್ಷಾಂತರ ಜನ ಕಣ್ತುಂಬಿಕೊoಡರು.
ಜೋಡಿ ರಥೋತ್ಸವದ ನಿಮಿತ್ತ ಪಂಪಾ ವಿರೂಪಾಕ್ಷೇಶ್ವರ ಸನ್ನಿಧಾನದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಪುನಸ್ಕಾರ ನೆರವೇರಿಸಲಾಯಿತು. ಸಂಜೆ ೬ ಗಂಟೆ ಸುಮಾರಿಗೆ ರಥ ಬೀದಿಯಿಂದ ಎದುರು ಬಸವಣ್ಣ ಮಂಟಪದ ಮಾರ್ಗದಲ್ಲಿನ ಪಾದಗಟ್ಟೆ ವರೆಗೆ ಸಾಗಿದ ಉಭಯ ತೇರುಗಳು ಬಳಿಕ ಮೂಲ ಸ್ಥಾನಕ್ಕೆ ಮರಳಿದವು. ರಥೋತ್ಸವ ಆರಂಭವಾಗುತ್ತಿದ್ದoತೆ ಜೈ ವಿರೂಪಾಕ್ಷೇಶ್ವರ, ಜೈ ಪಂಪಾದೀಶ, ಹರ ಹರ ಮಹಾದೇವ ಎಂಬ ಜಯ ಘೋಷಣೆಗಳೊಂದಿಗೆ ಭಕ್ತರು ರಥ ಎಳೆದು, ಭಕ್ತಿಯ ಪರಾಕಾಷ್ಟೆ ಮೆರೆದರು.
ಜಾತ್ರೆ ನಿಮಿತ್ತ ಕರ್ನಾಟಕವಲ್ಲದೇ ಆಂಧ್ರ ಪ್ರದೇಶದ ವಿವಿಧೆಡೆಯಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ರಥ ಬೀದಿ ಹೇಮಕೂಟ ಪರ್ವತ, ದೇವಸ್ಥಾನ ಎತ್ತ ನೋಡಿದರೂ ಜನರಿಂದ ತುಂಬಿ ತುಳುಕುತ್ತಿತ್ತು. ಬಿಸಿಲಿನ ಧಗೆಯನ್ನೂ ಲೆಕ್ಕಸಿದೇ ಹೇಮಕೂಟ ಪರ್ವತದ ಕಲ್ಲು ಬಂಡೆಗಳ ಮೇಲೆ ನಿಂತು ಜೋಡಿ ರಥೋತ್ಸವದ ವೈಭವವನ್ನು ಕಣ್ತುಂಬಿಕೊoಡು ಧನ್ಯತೆ ಮೆರೆದರು.