ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶದಲ್ಲಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದ ಭಾರತೀಯ ನಾವಿಕನೊಬ್ಬನ ಮೃತದೇಹದೊಂದಿಗೆ ವೆನೆಜುವೆಲಾ ದೇಶ ಕ್ರೂರವಾಗಿ ವರ್ತಿಸಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ನಿವಾಸಿ ರಾಕೇಶ್ ಚೌಹಾಣ್ (33) ಶವವನ್ನು ಭಾರತಕ್ಕೆ ತಂದು ಪರೀಕ್ಷಿಸಿದಾಗ, ದೇಹದ ಒಳಗಿನ ಒಂದೇ ಒಂದು ಪ್ರಮುಖ ಅಂಗವೂ ಪತ್ತೆಯಾಗಿಲ್ಲ!
ಹೃದಯಾಘಾತದ ನೆಪ:
ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಚೌಹಾಣ್ ಕಳೆದ ಮೇ ತಿಂಗಳಲ್ಲಿ ವೆನೆಜುವೆಲಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. ವೆನೆಜುವೆಲಾ ಸರ್ಕಾರ ಯಾವುದೇ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡದ ಕಾರಣ ಸಂಶಯಗೊಂಡ ಕುಟುಂಬಸ್ಥರು ಭಾರತಕ್ಕೆ ಶವ ಬಂದ ಬಳಿಕ ದಿಯೋರಿಯಾದಲ್ಲಿ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಕೋರಿದ್ದರು. ಭಾರತದ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ರಾಕೇಶ್ ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಲಿವರ್, ಕಿಡ್ನಿ, ಜಠರ ಮತ್ತು ಕರುಳು ಸೇರಿದಂತೆ ಯಾವೊಂದು ಪ್ರಮುಖ ಆಂತರಿಕ ಅಂಗಗಳೂ ದೇಹದಲ್ಲಿ ಇರಲಿಲ್ಲ.
ದೇಹದ ಮೇಲೆ 22ಕ್ಕೂ ಹೆಚ್ಚು ಆಪರೇಷನ್ ಹೊಲಿಗೆಗಳು!
ಭಾರತೀಯ ನಾವಿಕರ ಸಂಘಗಳ ಒಕ್ಕೂಟ (FSUI) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ರಾಕೇಶ್ ಮೃತದೇಹವನ್ನು ಸುಮಾರು ಒಂದು ತಿಂಗಳ ಕಾಲ ವೆನೆಜುವೆಲಾದಲ್ಲಿ ಡೀಪ್ ಫ್ರೀಜ್ನಲ್ಲಿ ಇಡಲಾಗಿತ್ತು. ಮೃತದೇಹದ ಕುತ್ತಿಗೆಯಿಂದ ಹೊಟ್ಟೆಯವರೆಗೆ 22 ಹೊಲಿಗೆಗಳು ಹಾಗೂ ಕಿವಿಯಿಂದ ಕಿವಿಯವರೆಗೆ 21 ಸರ್ಜಿಕಲ್ ಹೊಲಿಗೆಗಳ ಗುರುತುಗಳು ಕಂಡುಬಂದಿವೆ. ದೇಹದಲ್ಲಿ ಯಾವುದೇ ಅಂಗಾಂಗಗಳು ಇಲ್ಲದ ಕಾರಣ ಭಾರತದ ವೈದ್ಯರಿಗೆ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:
ಅಂತಾರಾಷ್ಟ್ರೀಯ ತನಿಖೆಗೆ ಹೆತ್ತವರ ಆಗ್ರಹ
ನಮಗೆ ಕೇವಲ ನಮ್ಮ ಮಗನ ಬೌತಿಕ ಶವ ಸಿಕ್ಕಿದೆ, ಆತನ ಪ್ರಮುಖ ಅಂಗಗಳನ್ನೆಲ್ಲಾ ವಿದೇಶದಲ್ಲೇ ದೋಚಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗನ ಸಾವಿನ ಮರೆಯಲ್ಲಿ ಅಂತಾರಾಷ್ಟ್ರೀಯ ಅಂಗಾಂಗ ಮಾರಾಟ ದಂಧೆ ನಡೆದಿದೆಯೇ ಎಂಬ ಸಂಶಯ ವ್ಯಕ್ತಪಡಿಸಿರುವ ಕುಟುಂಬ, ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದೆ.



