ಹೊಸದಿಗಂತ ವರದಿ ಚಿತ್ರದುರ್ಗ:
ನಗರದ ವಾಲ್ಮೀಕಿ ಭವನದಲ್ಲಿ ಜೂ.13 ರಂದು ಬ್ರಾಂಡ್ ಚಿತ್ರದುರ್ಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಎಕಾನಮಿಕ್ ಫೋರಂ ಚಿತ್ರದುರ್ಗ ಚಾಪ್ಟರ್ನ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳು ಒಗ್ಗಟ್ಟಾಗಿ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎನ್ನುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ.
ಬೀದರ್ನಿಂದ ಹಿಡಿದು ಮೈಸೂರುವರೆಗೂ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಬ್ರಾಂಡ್ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಬೆಂಗಳೂರಿನಿಂದ ತಂಡ ಆಗಮಿಸಲಿದ್ದು, ಜಿಲ್ಲೆಯಲ್ಲಿ ಸಿಗುವ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಪ್ರಯತ್ನ ಸಮಾವೇಶದ ಉದ್ದೇಶ ಎಂದರು.
ರಾಜ್ಯದಲ್ಲಿ ಐದು ಸೊಸೈಟಿಯಿದೆ. ಚಿತ್ರದುರ್ಗದಲ್ಲಿ ವಿ.ಡಿ.ಸಾವರ್ಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಗೊಂಡಿದ್ದು, 25 ಲಕ್ಷ ರೂ.ಗಳ ಠೇವಣಿಯಿದೆ. ಆರ್ಥಿಕ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಸೊಸೈಟಿಯನ್ನು ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:
ಚಿತ್ರದುರ್ಗವನ್ನು ಲಾಜಿಸ್ಟಿಕ್ ಹಬ್ ಮಾಡುವುದು. ಪ್ರವಾಸೋದ್ಯಮ ಅಭಿವೃದ್ದಿ, ಮೊಳಕಾಲ್ಮುರು ಸೀರೆಗಳು ಮತ್ತು ಕೈಮಗ್ಗ ಉದ್ಯಮದ ಬೆಳವಣಿಗೆ, ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮಗಳ ಅಭಿವೃದ್ದಿ, ಚಿತ್ರದುರ್ಗದ ರಫ್ತು ಸಾಮರ್ಥ್ಯ ಹೊಂದಿರುವ ಉತ್ಪನ್ನಗಳು, ಡಿಆರ್ಡಿಓ, ಐಐಎಸ್ಸಿ, ಇಸ್ರೋ ಸಂಬಂಧಿತ ಅವಕಾಶಗಳು, ಚಿತ್ರದುರ್ಗವನ್ನು ಕೈಗಾರಿಕಾ ಹಬ್ ಆಗಿ ರೂಪಿಸುವುದು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ದಿ, ಮಹಿಳಾ ಉದ್ಯಮಿಗಳ ಬೆಳವಣಿಗೆ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ರಾಘವೇಂದ್ರ ಮಾತನಾಡಿ, ಸ್ಥಳೀಯ ಯುವಕರಿಗೆ ವ್ಯಾಪಾರಸ್ಥರಿಗೆ ಉದ್ಯಮಿಗಳಿಗೆ ಅನುಕೂಲವಾಗಲಿ ಎನ್ನುವುದು ಸಮಾವೇಶದ ಉದ್ದೇಶ. ಕಾರ್ಯಾಗಾರದ ಜೊತೆ ಸ್ಟಾಲ್ಗಳನ್ನು ಹಾಕಲಾಗುವುದು. ಜಿಲ್ಲೆಯ ಎಲ್ಲಾ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ, ಅಶೋಕ್ ಟಿ.ಎಲ್. ಉಪಸ್ಥಿತರಿದ್ದರು.



