ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಎಲ್ಲಾ ಆಸ್ಪತ್ರೆಗಳು ಹಾಗೂ 1ರಿಂದ 10ನೇ ತರಗತಿವರೆಗಿನ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸುಳಿವು ನೀಡಿದ್ದಾರೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಕುಂದುಕೊರತೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಆಸ್ಪತ್ರೆ ಹಾಗೂ ಶಾಲಾ ಆವರಣದಲ್ಲಿರುವ ಕ್ಯಾಂಟೀನ್ಗಳಲ್ಲಿ ಆರೋಗ್ಯಕರ ಆಹಾರವನ್ನಷ್ಟೇ ಕನಿಷ್ಠ ದರದಲ್ಲಿ ಮಾರಾಟ ಮಾಡುವಂತೆ ನಿಯಮ ಜಾರಿಗೊಳಿಸುವ ಚಿಂತನೆ ನಡೆಯುತ್ತಿದೆ ಎಂದರು.
ಜಂಕ್ ಫುಡ್ಗಳ ಅತಿಯಾದ ಬಳಕೆಯಿಂದ ಕ್ಯಾನ್ಸರ್, ಮಧುಮೇಹ ಸೇರಿದಂತೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿವೆ. ಆದ್ದರಿಂದ ಶಾಲೆ ಹಾಗೂ ಆಸ್ಪತ್ರೆಗಳ ಮಟ್ಟದಲ್ಲೇ ಇಂತಹ ಆಹಾರಗಳ ಮಾರಾಟವನ್ನು ನಿಯಂತ್ರಿಸಿದರೆ ಜನರ ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:
ಆಹಾರ ಮತ್ತು ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ. ಮಾಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡುವ ಆಹಾರ ವಸ್ತುಗಳ ಗುಣಮಟ್ಟವನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ, ಗುಣಮಟ್ಟ ರಹಿತ ಆಹಾರ ವಸ್ತುಗಳ ಮಾರಾಟವನ್ನು ನಿರ್ಬಂಽಸಲಾಗುವುದು. ಮಾತ್ರವಲ್ಲ ಅಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿವರೆಗೆ ಅಂತಹ ಆಹಾರ ವಸ್ತುಗಳ ತಯಾರಕರ ವಿರುದ್ಧ ಕೇಸು ದಾಖಲಿಸಿದರೆ, ಗುಣಮಟ್ಟ ತಪಾಸಣೆ ಮೊದಲಾದ ಕೆಲವು ನ್ಯೂನತೆಗಳಿಂದ ಕೋರ್ಟ್ಗಳಲ್ಲಿ ಶಿಕ್ಷೆಯಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಬೆಂಗಳೂರಿನಲ್ಲಿ ಹಾಲಿ ಇರುವ ಆಹಾರ ಗುಣಮಟ್ಟ ತಪಾಸಣಾ ಲ್ಯಾಬ್ನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿ ಮೇಲ್ದರ್ಜೆಗೆ ಪಿಪಿಪಿ ಮಾದರಿಯಲ್ಲಿ ಏರಿಸಲು ನಿರ್ಧರಿಸಲಾಗಿದೆ. ಅಲ್ಲಿ ಆಹಾರ ವಸ್ತುಗಳ ತಪಾಸಣೆ ನಡೆಸಿ ನೀಡುವ ವರದಿ ಸುಪ್ರೀಂ ಕೋರ್ಟ್ ಕೂಡ ಸಮ್ಮತಿಸುವಂತೆ ಇರಬೇಕು. ಆಗ ಮಾತ್ರ ಕಲಬೆರಕೆಯಂತಹ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದು ಇದೇ ಸಂಧರ್ಭ ಅವರು ಹೇಳಿದರು.



