ಮೇಘನಾ ಶೆಟ್ಟಿ, ಶಿವಮೊಗ್ಗ
ಮುಂಗಾರುಮಳೆ ಸಿನಿಮಾದಲ್ಲಿ ದೇವದಾಸನನ್ನು ಉಳಿಸೋಕೆ ರೈಲ್ವೆ ಟ್ರಾಕ್ ಬಳಿ ಗಣೇಶ್ ಹೋದಾಗ ಒಂದು ಕ್ಷಣ ಎಲ್ಲರೂ ಉಸಿರು ಬಿಗಿ ಹಿಡಿದು ಕೂತಿದ್ದಿದೆ, ರೈಲಿನ ಹತ್ರ ಲೈಫ್ ರಿಸ್ಕ್ ತೆಗೆದುಕೊಳ್ಳೋತರ ಮಾಡೋದ್ಯಾಕೆ ಅನ್ನೋದು ಕೆಲವರ ಅಭಿಪ್ರಾಯ.
ಇನ್ನು ರೈಲ್ವೆ ನಿಲ್ದಾಣದಲ್ಲಿ ರೀಲ್ಸ್ ಮಾಡೋರು, ರೈಲಿನ ಕಿಟಕಿಯಿಂದ ಮುಖ, ಅರ್ಧ ದೇಹವನ್ನೇ ಹೊರಹಾಕೋರು, ಟ್ರೈನ್ ದೂರ ಇದೆ ಅಂತ ಧೈರ್ಯ ಮಾಡಿ ಹಳಿ ದಾಟೋರು, ಐದು ನಿಮಿಷ ಕಾಯೋಕಾಗದೆ ರೈಲ್ವೆ ಗೇಟ್ ನುಗ್ಗೋರು.. ಒಂದಲ್ಲಾ ಎರಡಲ್ಲಾ ಈ ರೈಲ್ವೆ ಡೇಂಜರ್.
ಆದರೆ ನಾವೀಗ ಹೇಳೋಕೆ ಹೊರಟಿರೋದು ರೈಲ್ವೆ ಮಾರ್ಕೆಟ್ ಬಗ್ಗೆ, ರೈಲಿನೊಳಗಿನ ಮಾರ್ಕೆಟ್ ಅಲ್ಲ, ರಸ್ತೆಬದಿ ಥರ ರೈಲ್ವೆ ಟ್ರಾಕ್ ಬಳಿ ಇರೋ ಮಾರ್ಕೆಟ್. ಬ್ಯಾಂಕಾಂಕ್ನ ಮೇ ಕ್ಲಾಂಗ್ ರೈಲ್ವೆ ಮಾರ್ಕೆ ಜೀವಭಯ ತರಿಸುವಂಥ ಮಾರ್ಕೆಟ್ ಆಗಿದೆ. ಇಲ್ಲಿ ಹಳಿಗಳ ಪಕ್ಕ, ಅಂದರೆ ಕೈ ಚಾಚಿದರೆ ರೈಲು ತಾಗೋ ಅಷ್ಟು ಹತ್ತಿರದಲ್ಲೇ ತರಕಾರಿ, ಹಣ್ಣು ಮಾರಾಟ ಮಾಡ್ತಾರೆ.
ಸಾಂಗ್ಖ್ರಾಮ್ ಪ್ರಾಂತ್ಯದ ಈ ಮಾರುಕಟ್ಟಯನ್ನು ಲೈಫ್ ರಿಸ್ಕಿಂಗ್ ಮಾರುಕಟ್ಟೆ ಅಂತಲೇ ಕರೆಯುತ್ತಾರೆ. ಥೈಲ್ಯಾಂಡ್ನ ಅದ್ಭುತ ಆಕರ್ಷಣೆಯಗಳಲ್ಲಿ ಇದೂ ಒಂದಾಗಿದೆ. 100 ಮೀಟರ್ ಹರಡಿರೋ ಮಾರ್ಕೆಟ್ನಲ್ಲಿ ಎಲ್ಲ ಬಗೆಹ ಹಣ್ಣು, ತರಕಾರಿ ಇತರೆ ವಸ್ತುಗಳು ದೊರೆಯುತ್ತದೆ, ಇದನ್ನು ಕೊಳ್ಳೋದಕ್ಕೆ ಸಾಕಷ್ಟು ಮಂದಿ ಗ್ರಾಹಕರೂ ಬರ್ತಾರೆ.
ಬೆಳಗ್ಗೆ 6 ರಿಂದ ರಾತ್ರಿ 6 ರವರೆಗೆ ತೆಗೆಯೋ ಮಾರ್ಕೆಟ್ ಇದಾಗಿದೆ. ರೈಲು ಬರುವ ದಾರಿವರೆಗೂ ತಮ್ಮ ಅಂಗಡಿ ಸಾಮಾನುಗಳು, ಟೆಂಟ್ಗಳನ್ನು ಹರಡಿಸಿರುತ್ತಾರೆ. ರೈಲು ಬರೋಕೆ ಇನ್ನೇನು ಮೂರು ನಿಮಿಷ ಇದೆ ಎನ್ನುವಾಗ ಸಿಬ್ಬಂದಿಯೊಬ್ಬರು ಜೋರಾಗಿ ವಿಶಲ್ ಹೊಡೆದು ರೈಲು ಬರುತ್ತಿದೆ ಎಂದು ಹೇಳುತ್ತಾರೆ.
ಮೂರೇ ನಿಮಿಷದಲ್ಲಿ ಹರಡಿದ ವಸ್ತುಗಳನ್ನು ಎತ್ತಿಟ್ಟು ರೈಲಿಗೆ ಜಾಗ ಮಾಡುತ್ತಾರೆ. ತಕ್ಷಣವೇ ಎಲ್ಲರನ್ನೂ ಸೈಡ್ಗೆ ಬರುವಂತೆ ಸೂಚಿಸಲಾಗುತ್ತದೆ. ರೈಲು ಹೋದ ನಂತರ ಮತ್ತೆ ವಸ್ತುಗಳನ್ನು ಹರಡುತ್ತಾರೆ. ಬಿಸಿಲಿನಿಂದ ರಕ್ಷಣೆಗೆ ಹಾಕುವ ಕ್ಯಾನ್ವಾಸ್ ಕೂಡ ಮತ್ತೆ ಹರಡುತ್ತಾರೆ.
ಸ್ಥಳೀಯರಿಗೆ ಇದು ಮಾಮೂಲು, ಪ್ರವಾಸಿಗರಿಗೆ ಈ ದೃಶ್ಯ ರೋಮಾಂಚನಾಕಾರಿಯಾಗಿ ಕಾಣುತ್ತದೆ. ದಿನಕ್ಕೆ ಆರು ಬಾರಿ ರೈಲು ಬರುತ್ತದೆ. ಇಂಥ ಜಾಗದಲ್ಲಿ ಮಾರ್ಕೆಟ್ ಯಾಕೆ ಬೇಕಿತ್ತು ಎಂದು ನಿಮಗೆ ಅನಿಸಬಹುದು. ಆದರೆ ಮೊದಲು ಈ ಜಾಗಕ್ಕೆ ಬಂದಿದ್ದು ಇದೇ ಮಾರ್ಕೆಟ್, ಮಾರ್ಕೆಟ್ ನಂತರ ರೈಲ್ವೆ ಹಳಿ ಬಂದಿದೆ, ಸಿಟಿಯನ್ನು ತಲುಪಲು ಹತ್ತಿರದ ಮಾರ್ಗ ಇದೇ ಆದ ಕಾರಣ ರೈಲ್ವೆ ಹಳಿ ಕೂಡ ಇಲ್ಲಿದೆ ಬಂದಿದೆ.
ನೀವು ಎಂದಾದರೂ ಬ್ಯಾಂಕಾಕ್ ಹೋದರೆ ಈ ರೈಲ್ವೆ ಮಾರುಕಟ್ಟೆಯನ್ನು ವಿಸಿಟ್ ಮಾಡಿ..