ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗೆ ನಾವು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ (Bahujan Samaj Party)ಮುಖ್ಯಸ್ಥೆ ಮಾಯಾವತಿ (Mayawati)ಭಾನುವಾರ ಹೇಳಿದ್ದಾರೆ.
ತಮ್ಮ 67ನೇ ಜನ್ಮದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಮುಂದಿನ ವರ್ಷ, ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಸ್ವಂತ ತಾಕತ್ತಿನ ಮೇಲೆ ಚುನಾವಣೆಯನ್ನು ಎದುರಿಸಲಿದೆ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಪಿತೂರಿಯ ಭಾಗವಾಗಿ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬ ಅನಿಸಿಕೆ ಮೂಡಿಸಲು ಪ್ರಯತ್ನಿಸುತ್ತಿರುವುದರಿಂದ ಈ ಘೋಷಣೆ ಮಾಡುವುದು ಅನಿವಾರ್ಯವಾಯಿತು ಎಂದು ಹೇಳಿದರು.
ಬಿಎಸ್ಪಿಯ ಮತದ ತಳಹಗಿ ಅಖಂಡವಾಗಿದೆ. ಆದರೆ ಚುನಾವಣೆಗಳಲ್ಲಿ, ಕೆಲವೊಮ್ಮೆ ಇತರ ಪಕ್ಷಗಳು ನೀಡಿದ ಭರವಸೆಗಳಿಂದ ಓಬಿಸಿಗಳು, ಅಲ್ಪಸಂಖ್ಯಾತರು ಮತ್ತು ಮೇಲ್ಜಾತಿಗಳಂತಹ ಇತರ ವಿಭಾಗಗಳು ದಾರಿ ತಪ್ಪುತ್ತವೆ. ಇದು ಹಿಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಹಾನಿಯನ್ನುಂಟುಮಾಡಿತು.ನಿಸ್ಸಂಶಯವಾಗಿ ಇವಿಎಂಗಳಲ್ಲಿ ಕೆಲವು ಗೊಂದಲ ಇದೆ ಎಂದು ನಾನು ಭಾವಿಸುತ್ತೇನೆ. ಇವಿಎಂಗಳ ಬಗ್ಗೆ ಅನುಮಾನಗಳಿವೆ. ಚುನಾವಣಾ ಆಯೋಗ ಮತ್ತು ಕೇಂದ್ರವು ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸಬೇಕು. ಎಷ್ಟು ಮತದಾರರು ಅವರೊಂದಿಗೆ ಇದ್ದಾರೆ ಮತ್ತು ಎಷ್ಟು ಮಂದಿ ನಮ್ಮೊಂದಿಗೆ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಬಿಎಸ್ಪಿಯ ಸಿದ್ಧಾಂತವು ಇತರ ವಿರೋಧ ಪಕ್ಷಗಳಿಗಿಂತ ಭಿನ್ನವಾಗಿದೆ ಮತ್ತು ಅದು ಯಾವುದೇ ಮೈತ್ರಿ ಮಾಡಿಕೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವುದರಿಂದ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಮಾಯಾವತಿ ಹೇಳಿದ್ದಾರೆ.