ಹೊಸದಿಗಂತ ವರದಿ, ಕಲಬುರಗಿ:
ಸಿಎಂ ಮಂಡಿಸಿದ 2022-23 ರ ಬಜೆಟ್ ಗೆ ದಿಕ್ಕು ದೆಸೆಯಿಲ್ಲ, ಮುಂದಾಲೋಚನೆ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಟೀಕಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ 2,65, 000 ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವಂತೆ ಯೋಜನೆಗಳಿಲ್ಲ. ಕೇವಲ 3000 ಕೋಟಿ ಘೋಷಣೆ ಮಾಡಲಾಗಿದೆ. ಆದರೆ ಅನುದಾನ ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.
ಕಳೆದೆರಡು ವರ್ಷದಲ್ಲಿ ಬಿಡುಗಡೆಯಾದ ರೂ 1100 ಕೋಟಿಯಲ್ಲಿ ಕೇವಲ 402 ( 35%) ಕೋಟಿ ಮಾತ್ರ ಖರ್ಚು ಮಾಡಲಾಗಿದೆ. 2021-22 ರಲ್ಲಿ ಬಿಡುಗಡೆಯಾದ ರೂ 1500 ಕೋಟಿಯಲ್ಲಿ ಕೇವಲ ರೂ 270 ಕೋಟಿ ಮಾತ್ರ ಖರ್ಚಾಗಿದೆ. ಎರಡು ವರ್ಷದಲ್ಲಿ ಕೇವಲ ರೂ 680 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ.
32 ತಿಂಗಳಲಿ ಪ್ರಾಥಮಿಕ ಶಾಲೆಗಳಲ್ಲಿ 15500 ಹುದ್ದೆಗಳು ಖಾಲಿ ಇವೆ. ಹೈಸ್ಕೂಲ್ ಮಟ್ಟದಲ್ಲಿ 3000 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಶಿಕ್ಷಣ ಕೇತ್ರದಲ್ಲಿ 20,000 ಹುದ್ದೆಗಳು ಖಾಲಿ ಇವೆ. ಹುದ್ದೆ ತುಂಬಲು ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯದಲ್ಲಿ ಬಡತನ ತಾಂಡವವಾಡುತ್ತಿದೆ. ರಾಜ್ಯದಲ್ಲಿ 38% ಬಡತನ ಯಾದಗಿರಿಯಲ್ಲಿ ಇದೆ.
ನೀರಾವರಿ ಯೋಜನೆಗೆ ನಿರ್ಲಕ್ಷ್ಯ ಮಾಡಲಾಗಿದೆ. ಕೆರೆತುಂಬುವ ಯೋಜನಗೆಳು ಹಾಗೂ ನೀರಾವರಿ ಯೋಜನೆಗಳನ್ನು ತಡೆ ಹಿಡಿಯಲಾಗಿದೆ.
ಕುಮಾರಸ್ವಾಮಿ ಅವರು ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಬಗ್ಗೆ ಹೇಳಿದರೆ ಏನೂ ಹೇಳಲಾಗದು. ನಮ್ಮ ಪಾದಾಯಾತ್ರೆ ನಂತರ ಸರ್ಕಾರ ರೂ 1000 ಕೋಟಿ ಅನುದಾನ ಘೋಷಿಸಿದೆ. ಈ ಯೋಜನೆಯಿಂದ ಬೆಂಗಳೂರು ಜನರಿಗೆ ಕುಡಿಯುವ ನೀರ ಲಭ್ಯವಾಗಲಿದೆ. ಕುಮಾರಸ್ವಾಮಿ ಈ ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ.
ಈ ಸಂದರ್ಭದಲ್ಲಿ ಶಾಸಕರಾದ ಎಂ ವೈ ಪಾಟೀಲ್, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ್, ಮಾಜಿಎಂಎಲ್ಸಿಗಳಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಎಂ ಎಲ್ ಎ ಬಿ.ಆರ್.ಪಾಟೀಲ್, ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ್, ಶರಣು ಮೋದಿ, ನೀಲಕಂಠರಾವ ಮುಲಗೆ ಸೇರಿದಂತೆ ಮತ್ತಿತರಿದ್ದರು.