ಹೊಸ ದಿಗಂತ ಡಿಜಿಟಲ್ ಡೆಸ್ಕ್
ಜನಸಾಮಾನ್ಯರ ಬಾಯಲ್ಲಿ ಬುಲೆಟ್ ಟ್ರೇನ್ ಎಂದಾಗಿರುವ ಮುಂಬೈ ಮತ್ತು ಅಹಮದಾಬಾದ್ ನಡುವಿನ ಅತಿವೇಗದ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆಯೇ?
ಈ ನಿಟ್ಟಿನಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಸಂಸತ್ತಿನಲ್ಲಿ ಮಂಡಿಸಿರುವ ಅಂಶಗಳು ಗಮನಾರ್ಹವಾಗಿವೆ.
ಈ ಯೋಜನೆಗೆ ಬೇಕಾದ ಶೇ. 89ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಭೂ ಸ್ವಾಧೀನವಾಗದ ಹೊರತು ಉಳಿದ ಕೆಲಸಗಳು ಶುರುವಾಗುವುದಿಲ್ಲ. ಭೂಸ್ವಾಧೀನ ರಾಜ್ಯಗಳ ಜತೆಗಿನ ಸಂಯೋಜನೆಯಿಂದ ಮಾತ್ರ ಸಾಧ್ಯವಾಗುವಂಥದ್ದು. ಸಚಿವರು ತಿಳಿಸಿದ ಮಾಹಿತಿಯ ಪ್ರಕಾರ ಮಹಾರಾಷ್ಟ್ರ ಸರ್ಕಾರವು ಭೂಸ್ವಾಧೀನದಲ್ಲಿ ತ್ವರಿತ ಬೆಳವಣಿಗೆ ಸಾಧಿಸದೇ ಇರುವುದೇ ಅತಿವೇಗದ ಈ ರೈಲು ಯೋಜನೆ ವಿಳಂಬವಾಗುವುದಕ್ಕೆ ಕಾರಣ. ಇದರೊಂದಿಗೆ ಕೋವಿಡ್ ಕಾಲದಲ್ಲಿ ಎದುರಾದ ಸಮಸ್ಯೆಗಳೂ ವಿಳಂಬಕ್ಕೆ ಕೊಡುಗೆ ನೀಡಿವೆ.
ಈ ಯೋಜನೆಗೆ ಸಂಬಂಧಿಸಿದಂತೆ ಗುಜರಾತಿನಲ್ಲಿ ಎಲ್ಲವೂ ಶೀಘ್ರಗತಿಯಲ್ಲಾಗುತ್ತಿದ್ದರೆ, ಮಹಾರಾಷ್ಟ್ರ ಮಾತ್ರ ಆ ವೇಗ ಕಾಪಾಡಿಕೊಂಡಿಲ್ಲ ಎಂಬುದು ಭೂಸ್ವಾಧೀನದ ಅಂಕಿಅಂಶಗಳಿಂದ ತಿಳಿದು ಬರುತ್ತದೆ.
ಗುಜರಾತ್ ಈವರೆಗೆ ತನ್ನ ನೆಲದಲ್ಲಿ ಯೋಜನೆಗೆ ಬೇಕಾಗಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ಶೇ. 98.76ರಷ್ಟು ಪೂರೈಸಿಬಿಟ್ಟಿದೆ. ಆದರೆ ಮಹಾರಾಷ್ಟ್ರ ಮಾತ್ರ ಅಗತ್ಯವಿರುವ ಭೂಮಿಯ ಶೇ. 68.65ರಷ್ಟನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.