ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನಿವಾಸಿ ಭಾರತೀಯ (NRI) ಇಲಾಖೆಯನ್ನು ಸ್ಥಾಪಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹತ್ತಕ್ಕೂ ಹೆಚ್ಚು ಅನಿವಾಸಿ ಭಾರತೀಯ ಸಂಸ್ಥೆಗಳ ಪ್ರಮುಖರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಚರ್ಚಿಸಿದ್ದಾರೆ.
ಇಲಾಖೆಯ ಮುಖ್ಯ ಉದ್ದೇಶಗಳೇನು?
ವಿದೇಶದಲ್ಲಿ ನೆಲೆಸಿರುವ ಲಕ್ಷಾಂತರ ಕನ್ನಡಿಗರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ಈ ಇಲಾಖೆಯ ಮೂಲ ಉದ್ದೇಶವಾಗಿದೆ. ಇದರೊಂದಿಗೆ:
- ಜಾಗತಿಕ ಮಟ್ಟದಲ್ಲಿ ಬಂಡವಾಳ ಕ್ರೂಢೀಕರಣ ಮತ್ತು ವ್ಯಾಪಾರ ವೃದ್ಧಿ.
- ಯುವಜನತೆಗೆ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ.
- ಅತ್ಯುತ್ತಮ ಆರೋಗ್ಯ ಸೌಲಭ್ಯಗಳ ಸೃಜನೆ.
ಇತರ ರಾಜ್ಯಗಳ ಮಾದರಿಯಲ್ಲಿ ಅಭಿವೃದ್ಧಿ
ಕೇರಳ, ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳ ಯಶಸ್ವಿ ಮಾದರಿಯನ್ನು ಆಧರಿಸಿ ಕರ್ನಾಟಕದಲ್ಲಿಯೂ ಈ ಇಲಾಖೆಯನ್ನು ರೂಪಿಸಲಾಗುತ್ತಿದೆ. ವಿದೇಶದಲ್ಲಿ ಕನ್ನಡಿಗರು ಎದುರಿಸುವ ಕಾನೂನು ಸಂಕಷ್ಟಗಳು, ಪಾಸ್ಪೋರ್ಟ್ ಸಮಸ್ಯೆಗಳು ಹಾಗೂ ತುರ್ತು ಸಂದರ್ಭಗಳಲ್ಲಿ (ಮರಣ ಇತ್ಯಾದಿ) ನೆರವಾಗಲು ಇದು ಸದಾ ಸಿದ್ಧವಿರಲಿದೆ. ಜೊತೆಗೆ, ದೂರುಗಳ ಶೀಘ್ರ ವಿಲೇವಾರಿಗೆ ಪ್ರತ್ಯೇಕ ವಿಚಾರಣಾ ಡೆಸ್ಕ್ ಸಹ ಆರಂಭವಾಗಲಿದೆ.
50 ಲಕ್ಷ ಕನ್ನಡಿಗರಿಗೆ ಅನುಕೂಲ
ವಿಶ್ವದಾದ್ಯಂತ ಇರುವ ಸುಮಾರು 50 ಲಕ್ಷ ಅನಿವಾಸಿ ಕನ್ನಡಿಗರಿಗೆ ಈ ನಿರ್ಧಾರದಿಂದ ನೇರ ಪ್ರಯೋಜನ ಸಿಗಲಿದೆ. ಇದು ರಾಜ್ಯದ ಆರ್ಥಿಕತೆಗೆ ವಿದೇಶಿ ವಿನಿಮಯದ ಬಲ ತುಂಬಲಿದ್ದು, ಸಂಘಟನೆಗಳು ಇದನ್ನು ಸರ್ಕಾರದ ‘ಆರನೇ ಗ್ಯಾರಂಟಿ’ ಎಂದು ಹರ್ಷ ವ್ಯಕ್ತಪಡಿಸಿವೆ.



