ಹೊಸದಿಗಂತ ಡಿಜಿಟಲ್ ಡೆಸ್ಕ್
ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಆಪರೇಶನ್ ಗಂಗಾ ಮಿಷನ್ ಕೈಗೊಳ್ಳಲಾಗಿದೆ. ಆದರೆ ಚಂಡೀಗಢ ಮೂಲದ ವಿದ್ಯಾರ್ಥಿನಿಯೊಬ್ಬರು ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ.
ಕಾರಣ, ಎರಡು ವರ್ಷಗಳ ಕಾಲ ತನಗೆ ಆಶ್ರಯ ನೀಡಿದ ಮನೆ ಮಾಲೀಕರ ಕುಟುಂಬವನ್ನು ಸಂಕಷ್ಟದ ಈ ಸಮಯದಲ್ಲಿ ತೊರೆದು ಬರುವುದು ಮಾನವೀಯತೆ ಅಲ್ಲ ಅನ್ನುವುದು.
ಹರಿಯಾಣ ಚಾರ್ಖಿ ದಾದ್ರಿ ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿ ನೇಹಾ ಎರಡು ವರ್ಷದ ಹಿಂದೆ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಹಾಸ್ಟೆಲ್ ವ್ಯವಸ್ಥೆ ಸಿಗದೇ ಇರುವುದರಿಂದ ಇಂಜಿನಿಯರ್ ಒಬ್ಬರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಿದ್ದರು. ಕಳೆದ ಕೆಲವು ದಿನಗಳಿಂದ ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿದ್ದು, ಮನೆ ಮಾಲೀಕ ಸ್ವಯಂ ಪ್ರೇರಣೆಯಿಂದ ಉಕ್ರೇನಿಯನ್ ಸೈನ್ಯ ಸೇರಿದ್ದಾರೆ. ಈ ವೇಳೆ ನೇಹಾಗೆ ತನ್ನ ಮೂವರು ಮಕ್ಕಳು ಮತ್ತು ಪತ್ನಿಗೆ ಸಹಾಯ ಮಾಡುವಂತೆ ಹೇಳಿದ್ದಾರೆ.
ಸದ್ಯ ನೇಹಾ ಮತ್ತು ಮನೆ ಮಾಲೀಕನ ಮೂವರು ಮಕ್ಕಳು ಹಾಗೂ ಪತ್ನಿ ಬಂಕರ್ ನಲ್ಲಿ ಸುರಕ್ಷಿತವಾಗಿದ್ದಾರೆ. ‘ನಾನು ಬದುಕಬಹುದು ಅಥವಾ ಬದುಕದೇ ಇರಬಹುದು. ಆದರೆ ನಾನು ಈ ಮಕ್ಕಳನ್ನು ಮತ್ತು ಅವರ ತಾಯಿಯನ್ನು ಅಂತಹ ಪರಿಸ್ಥಿತಿಯಲ್ಲಿ ಕೈ ಬಿಡುವುದಿಲ್ಲ. ನಾವು ಹೊರಗೆ ಸ್ಫೋಟಗಳನ್ನು ಕೇಳುತ್ತಿದ್ದೇವೆ. ಆದರೆ ನಾವು ಇಲ್ಲಿಯವರೆಗೆ ಸುರಕ್ಷಿತವಾಗಿ ಇದ್ದೇವೆ ಎಂದು ತನ್ನ ತಾಯಿ ಮತ್ತು ಸ್ನೇಹಿತರಿಗೆ ತಿಳಿಸಿದ್ದಾಳೆ.
ನೇಹಾಗೆ ಉಕ್ರೇನ್ ತೊರೆಯುವಂತೆ ಸಲಹೆಗಳು ಬಂದವು. ಆಕೆಯ ತಾಯಿ ತನ್ನ ಮಗಳನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಅಂತಿಮವಾಗಿ, ಹುಡುಗಿಗೆ ರೊಮೇನಿಯಾ ಮೂಲಕ ಉಕ್ರೇನ್ ದಾಟಲು ಅವಕಾಶ ಸಿಕ್ಕಿತು. ಆದರೆ ಈ ಸಂದಿಗ್ಧ ಸನ್ನಿವೇಶದಲ್ಲಿ ತಾನು ವಾಸಿಸುತ್ತಿದ್ದ ಪ್ರೀತಿಯ ಕುಟುಂಬವನ್ನು ತ್ಯಜಿಸಲು ಆಕೆ ನಿರಾಕರಿಸಿದಳು ಎಂದು ನೇಹಾ ಅವರ ಆಪ್ತ ಸ್ನೇಹಿತೆ ಸವಿತಾ ಜಾಖರ್ ಹೇಳಿದ್ದಾರೆ.
ಯುವತಿಯು ಕೆಲವು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿದ್ದ ತನ್ನ ತಂದೆಯನ್ನು ಕಳೆದುಕೊಂಡಿದ್ದಾಳೆ. ಕಳೆದ ವರ್ಷ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೆ ತೆರಳಿದ್ದಳು. ಈಗ ಉಕ್ರೇನ್ ತೊರೆಯದಿದ್ದರೆ, ಆಕೆ ತನ್ನ ಪ್ರಾಣ ಕಳೆದುಕೊಳ್ಳಬಹುದೆಂದು ತಿಳಿದಿದ್ದರೂ ಅವಳು ಹಿಂತಿರುಗುವುದಿಲ್ಲ ಎಂದು ನಿರ್ಧರಿಸುತ್ತಾಳೆ.