ಹೊಸದಿಗಂತವರದಿ, ಗದಗ :
ರಾಷ್ಟ್ರೀಯ ಹೆದ್ದಾರಿ ರಿಪೇರಿ ಹಿನ್ನೆಲೆ ಒನ್ ವೇಯಲ್ಲಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯ ಮುಖಾಮುಖಿ ಡಿಕ್ಕಿಯಾದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ಬುಧವಾರ ಜರುಗಿದೆ.
ಕೊಪ್ಪಳದಿಂದ ಗದಗ ಕಡೆಗೆ ಬರುತ್ತಿದ್ದ ಸಾರಿಗೆ ಬಸ್ ಮತ್ತು ಗದಗದಿಂದ ಕೊಪ್ಪಳದ ಕಡೆಗೆ ಹೊರಟಿದ್ದ ತಮಿಳುನಾಡು ಮೂಲದ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ತಮಿಳುನಾಡು ಮೂಲದ ಲಾರಿ ಚಾಲಕ ವಿನೋದ್ ಕುಮಾರ್ (೩೮) ಹಾಗೂ ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಭಾಗ್ಯನಗರದ ನಿವಾಸಿ ಗೀತಾ ಕಲಾಲ್ (೪೦) ಎಂಬುವರು ಕೊಪ್ಪಳದಿಂದ ಗದಗ ತಲುಪಿ ಅಲ್ಲಿಂದ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೊರಟಿದ್ದರು ಎನ್ನಲಾಗಿದೆ. ಇನ್ನೋರ್ವರ ಗುರುತು ಪತ್ತೆಯಾಗಿಲ್ಲ.
ಅದೇರೀತಿ ಲಾರಿಯು ಗೋವಾದಿಂದ ವೈದ್ಯಕೀಯ ಉಪಕರಣಗಳನ್ನು ತುಂಬಿಕೊಂಡು ಸೇಲಂಗೆ ಹೊರಟಿತ್ತು ಎನ್ನಲಾಗಿದೆ. ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.