ಹೊಸದಿಗಂತ ಡಿಜಿಟಲ್ ಡೆಸ್ಕ್
ಸೇನೆ ಸೇರಬೇಕೆಂಬ ಕನಸಿನ ಮೂಟೆ ಹೊತ್ತು ದಿನ ರಾತ್ರಿ ವೇಳೆ 10 ಕಿಲೋಮೀಟರ್ ಓಡುವ ಅಭ್ಯಾಸ ರೂಢಿಸಿಕೊಂಡಿರುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ.
ವಿಡಿಯೋ ನೋಡಿ ಖುಶಿ ಪಟ್ಟು ಕಮೆಂಟ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ, ‘ಯುವಕ ನಿಜಕ್ಕೂ ಸ್ಫೂರ್ತಿದಾಯಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿರುವ ಒಬ್ಬರು, ಯುವಕನಿಗೆ ಯಾವ ರೀತಿಯಲ್ಲಾದರೂ ಸಹಾಯ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ, ಯುವಕನ ಶ್ರದ್ಧೆ ನಿಜಕ್ಕೂ ಸ್ಫೂರ್ತಿದಾಯಕ. ಈತನಿಗೆ ಯಾರ ಸಹಾಯದ ಅಗತ್ಯವಿಲ್ಲ. ಅವನು ‘ಆತ್ಮನಿರ್ಭರ’ ಎಂದು ಬರೆದಿದ್ದಾರೆ.
ಗಾಯಕ ಬಾದ್ಶಾ ಸಹ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ‘ನಮ್ಮ ದೇಶದ ಭವಿಷ್ಯ ದೃಢ ವ್ಯಕ್ತಿಗಳ ಕೈಯಲ್ಲಿದೆ’ ಎಂದಿದ್ದಾರೆ.
19 ವರ್ಷದ ಉತ್ತರಾಖಂಡದ ಯುವಕ ಪ್ರದೀಪ್ ದೆಹಲಿಯ ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡುತ್ತಿದ್ದು, ಭಾರತೀಯ ಸೇನೆ ಸೇರಬೇಕೆಂಬ ಗುರಿ ಹೊಂದಿದ್ದಾನೆ. ಇದಕ್ಕಾಗಿ ಈತ ಪ್ರತಿದಿನ ರಾತ್ರಿ ಕೆಲಸ ಮುಗಿಸಿಕೊಂಡು 10 ಕಿಲೋ ಮೀಟರ್ ದೂರ ಇರುವ ತನ್ನ ಮನೆಗೆ ಓಡುತ್ತಲೇ ದಾರಿಯನ್ನು ಕ್ರಮಿಸುತ್ತಾನೆ. ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಅವರು ಯುವಕ ಪ್ರದೀಪ್ ಓಡುತ್ತಿದ್ದಾಗ ಆತನಿಗೆ ಸಹಾಯ ಬೇಕೆ ಎಂದು ಕೇಳಿದಾಗ ತಾನು ಓಡುತ್ತಿರುವುದರ ಉದ್ದೇಶ ತಿಳಿಸಿದ್ದಾನೆ. ಈ ವಿಡಿಯೋವನ್ನು ವಿನೋದ್ ಕಪ್ರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
This is indeed inspiring. But you know what my #MondayMotivation is? The fact that he is so independent & refuses the offer of a ride. He doesn’t need help. He is Aatmanirbhar! https://t.co/8H1BV4v5Mr
— anand mahindra (@anandmahindra) March 21, 2022