ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಡ್ಡಿದ್ದಷ್ಟು ದೊಡ್ಡ ಶಾಲೆ ಎನ್ನುವ ಈ ಕಾಲದಲ್ಲಿ ಸರ್ಕಾರಿ ಶಾಲೆಯಲ್ಲಿ ಮಗನನ್ನು ಓದಿಸಿ ಅದೇ ಶಾಲೆಗೆ ಎರಡು ಕೋಟಿ ರೂ. ಹಣವನ್ನು ಉದ್ಯಮಿಯೊಬ್ಬರು ದೇಣಿಗೆ ನೀಡಿದ್ದಾರೆ.
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು, ಸರ್ಕಾರಿ ಶಾಲೆಗಳ ಬಗ್ಗೆಗಿನ ನಿರ್ಲಕ್ಷ್ಯದಿಂದ ಹಲವು ಶಾಲೆಗಳು ಮುಚ್ಚಿಹೋಗುತ್ತಿವೆ, ಆದರೆ ಇಲ್ಲೊಬ್ಬರು ಶಾಲೆ ಅಭಿವೃದ್ಧಿಗೆ ಎರಡು ಕೋಟಿ ರೂ.ದೇಣಿಗೆ ನೀಡಿದ್ದಲ್ಲದೇ ಅದೇ ಸರ್ಕಾರಿ ಶಾಲೆಯಲ್ಲಿ ತಮ್ಮ ಮಗನಿಗೆ ಶಿಕ್ಷಣ ಕೊಡಿಸುವ ಮೂಲಕ ಮಾದರಿಯಾಗಿದ್ದಾರೆ.
ಮುದ್ರೆಮನೆ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರಾದ ಸಂತೋಷ್, ಸರ್ಕಾರಿ ಶಾಲೆಯಲ್ಲಿ ಓದಿ, ನಂತರ ಕಾಫಿ ಉದ್ಯಮದಲ್ಲಿ ಸಾಧನೆ ಮಾಡಿದ್ದಾರೆ. ಸದ್ಯ ಅವರು ಕಾಫಿ ರಫ್ತು ಉದ್ಯಮ ನಡೆಸುತ್ತಿದ್ದಾರೆ. ಸಂತೋಷ ಅವರು 2 ಕೋಟಿ ರೂ. ವೆಚ್ಚದಲ್ಲಿ 8 ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ದೇಣಿಗೆ ನೀಡಿರುವುದು ಮಾತ್ರವಲ್ಲದೆ ನಾನು ಸರಕಾರಿ ಶಾಲೆಯಲ್ಲಿ ಕಲಿತಿದ್ದೇನೆ. ನನ್ನ ಮಗನೂ ಸರ್ಕಾರಿ ಶಾಲೆಯಲ್ಲಿ ಓದಬೇಕೆಂಬ ಆಸೆಯಿಂದ ತಮ್ಮ ಮಗನನ್ನೂ ಇದೇ ಶಾಲೆಯಲ್ಲಿ ಓದಿಸುತ್ತಿದ್ದಾರೆ.
ತಾವು ಕೋಟ್ಯಧಿಪತಿಯಾಗಿದ್ದರೂ ಯಾವುದೇ ಖಾಸಗಿ ಶಾಲೆ ಮೊರೆ ಹೋಗದೆ ಸರಕಾರಿ ಶಾಲೆಗೆ ದೇಣಿಗೆ ನೀಡಿ ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಮುತ್ತಿಗೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1973ರಲ್ಲಿ ಆರಂಭ ವಾಗಿದ್ದು, ಎಲ್ಕೆಜಿಯಿಂದ ಏಳನೇ ತರಗತಿವರೆಗೂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ 150 ಸೇರಿ 363 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
18 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ, ದೇಣಿಗೆಯ ನೆರವಿನಿಂದ ವಿವೇಕ ಯೋಜನೆಯಡಿಯಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಹೆಚ್ಚುವರಿ ತರಗತಿ ಕೊಠಡಿಗಳನ್ನು ಸೇರಿಸಲಾಗಿದೆ. ಫೆಬ್ರವರಿ 28 ರಂದು ಒಟ್ಟು 12 ತರಗತಿ ಕೊಠಡಿಗಳನ್ನು ಉದ್ಘಾಟನೆ ಮಾಡಲಾಗುತ್ತದೆ. ಮೂಡಿಗೆರೆಯ ಸುತ್ತಮುತ್ತಲ 25ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಮಕ್ಕಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.