ಹೊಸದಿಗಂತ ವರದಿ ವಿಜಯನಗರ:
ಸಮಾಜ ವಿರೋಧಿ ಸ್ಟೇಟಸ್ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಕೆಲ ಪುಂಡರು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನಾವೂ ಉಪ್ಪು, ಹುಳಿ, ಖಾರ ತಿನ್ನುತ್ತೇವೆ. ನಮ್ಮನ್ನು ಕೆರಳಿಸುವ ಕೆಲಸ ಮಾಡುವುದು ಸರಿಯಲ್ಲ ನಾವು ಎಲವನ್ನು ಸಹಿಸಿಕೊಂಡು ತಾಳ್ಮೆಯಿಂದ ಇದ್ದೇವೆ. ಈ ಕಿಡಿಗೇಡಿಗಳ ಗಲಭೆಯಿಂದ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸಮಾಜ ವಿರೋಧಿ ಸ್ಟೇಟಸ್ ಹಾಕುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಪ್ರಯತ್ನ ಮಾಡಲಾಗುತ್ತಿದೆ. ಕಡಿವಾಣ ಹಾಕುವತ್ತ ಗೃಹ ಇಲಾಖೆ ಗಮನಹರಿಸಬೇಕು. ಹಿಂದೂಗಳನ್ನು ಕೆರಳಿಸುವ ಕೆಲಸ ಮಾಡುವುದು ಖಂಡನೀಯ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಹಾಗೂ ದೇಶ ವಿರೋಧಿ ಪ್ರಚೋದನಕಾರಿ ಸ್ಟೇಟಸ್ ಹಾಕುವವರನ್ನು ಮಟ್ಟ ಹಾಕಬೇಕಿದೆ. ಈ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವವರ ಹೆಡೆಮುರಿ ಕಟ್ಟಲು ಪೊಲೀಸರಿಗೆ ಕರೆ ನೀಡಿದರು. ಎಂ.ಎಫ್.ಹುಸೇನ್ ಹಾಗೂ ಮತ್ತಿತರರು ಹಿಂದೂ ದೇವತೆಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಚಿತ್ರ ಬಿಡಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದ್ದ ಜಾತ್ಯತೀತರು ಸಮಾಜದಲ್ಲಿ ಅಶಾಂತಿಯನ್ನು ಉದ್ದೇಶಪೂರ್ವಕವಾಗಿ ಉಂಟು ಮಾಡುವವರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜಾತ್ಯತೀತರೆಂದು ಹೇಳಿಕೊಳ್ಳುವ ರಾಜಕೀಯ ವ್ಯಕ್ತಿಗಳು ಹಾಗೂ ಬುದ್ದಿ ಜೀವಿಗಳು ದೇಶ ವಿರೋಧಿಕೃತ್ಯ ಎಸಗುವವರಿಗೆ ಬುದ್ಧಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.