ಹೊಸದಿಗಂತ ವರದಿ, ಆಲೂರು :
ಕಾಡಾನೆಗಳ ದಾಳಿಯಿಂದ ಬೇಸತ್ತು ಹೋಗಿರುವ ತಾಲೂಕಿನ ರೈತರಿಗೆ ಚಿರತೆ ಹಾವಳಿ ಬಹಳವಾಗಿ ಕಾಡಿದ್ದು, ತಾಲೂಕಿನ ಕಾಣಿಗೆರೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ತಿಂದು ಹಾಕಿರುವ ಚಿರತೆಯಿಂದ ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಿಂದ ಪ್ರಾಣ ಉಳಿಸಿಕೊಂಡಿದ್ದಾರೆ.
ಗ್ರಾಮದ ಸುನಿಲ್ ಎಂಬುವರು ತಮ್ಮ ಕಾಫಿ ತೋಟದೊಳಗೆ ಮನೆ ಕಟ್ಟಿಕೊಂಡು ವಾಸವಿದ್ದು, ಅಲ್ಲಿಂದ ಸುಮಾರು ೪೦೦ ಅಡಿ ದೂರದಲ್ಲಿ ದನಕರುಗಳನ್ನು ಕಟ್ಟಿಹಾಕುವ ಕೊಟ್ಟಿಗೆ ಇದೆ. ಎಂದಿನಂತೆ ಮಂಗಳವಾರ ಬೆಳಗ್ಗೆ ೬ ಗಂಟೆ ವೇಳಗೆ ಕೊಟ್ಟಿಗೆ ಬಳಿ ಹೋದಾಗ ಕರು ಹೊರಗೆ ಸತ್ತು ಬಿದ್ದಿತ್ತು. ಸ್ವಲ್ಪ ದೂರದಲ್ಲಿಯೇ ಚಿರತೆ ಕಾಣಿಸಿಕೊಂಡಿದ್ದು ಅದು ಆತನ ಮೇಲೂ ದಾಳಿ ಮಾಡಲು ಗುಟುರು ಹಾಕುತ್ತ ಮುಂದೆ ಬಂದಾಗ ಕೂಡಲೇ ಕೊಟ್ಟಿಗೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಸ್ವಲ್ಪ ಯಾಮಾರಿದ್ದರೂ ಸುನೀಲ್ ಚಿರತೆಗೆ ಬಲಿಯಾಗುತ್ತಿದ್ದರು.
ವಿಷಯ ತಿಳಿದ ತಕ್ಷಣ ವಲಯ ಅರಣ್ಯಧಿಕಾರಿ ಬಿ.ಜಿ.ಜಗದೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಹಿಡಿಯಲು ಬೋನು ಅಳವಡಿಸಿದ್ದಾರೆ. ಸಾರ್ವಜನಿಕರು ಬೆಳಗ್ಗೆ, ಸಂಜೆ ವೇಳೆಯಲ್ಲಿ ಮಕ್ಕಳನ್ನು ಸಾಧ್ಯವಾದಷ್ಟು ಹೊರಗೆ ಬಿಡಬಾರದು ಎಂದು ಅರಣ್ಯ ಇಲಾಖೆಯಿಂದ ಮನವಿ ಮಾಡಲಾಗಿದ್ದು ಜಾಗ್ರತೆಯಿಂದ ಓಡಾಡಲು ಪ್ರಚಾರ ಮಾಡುತ್ತಿದ್ದಾರೆ.