ಹೊಸದಿಗಂತ ವರದಿ, ಹಾಸನ:
ನಗರದ ಇಲಾಹಿ ನಗರದ ದಂಪತಿ ಕೌಟುಂಬಿಕ ಕಲಹ ಹಿನ್ನೆಲೆ ಆದರ್ಶ ನಗರದಲ್ಲಿರುವ ಚಿಕ್ಕ ಟ್ಟೆ ಕೆರೆಗೆ ಹಾರಿ ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಅಡ್ಡಿಮನೆ ರಸ್ತೆಯ ಚಿಕ್ಕಟ್ಟೆ ಕೆರೆಯಲ್ಲಿ ರಿಜ್ವಾನ್ (31), ಸಮ್ಮಿನ್ ಭಾನು (25) ಆತ್ಮಹತ್ಯೆಗೆ ಶರಣಾದ ದಂಪತಿ. ಈ ದಂಪತಿ ನಗರದ ಇಲಾಹಿ ನಗರದಲ್ಲಿ ವಾಸವಾಗಿದ್ದರು. ಸೋಮವಾರ ಸಂಜೆ ಇಬ್ಬರ ನಡುವೆ ಜಗಳ ನಡೆದಿತ್ತು. ಗಂಡ-ಹೆಂಡತಿ ಇಬ್ಬರೂ ಮಂಗಳವಾರ ಬೆಳಿಗ್ಗೆ ಫಲ್ಸರ್ ಬೈಕ್ ನಲ್ಲಿ ಚಿಕ್ಕಟ್ಟೆ ಕೆರೆ ಬಳಿ ಬಂದು ನೀರಿಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎಸ್ ಡಿಪಿಐ ಕಾರ್ಯಕರ್ತರು, ನೀರಿನಲ್ಲಿ ಶೋಧ ನಡೆಸಿ ದಂಪತಿಯ ಶವಗಳನ್ನು ಹೊರ ತೆಗೆದರು. ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.