ಹೊಸದಿಗಂತ ಡಿಜಿಟಲ್ ಡೆಸ್ಕ್:
26 ಸಾವಿರ ಶಿಕ್ಷಕರ ನೇಮಕಾತಿಯನ್ನು ರದ್ದು ಮಾಡಿದ್ದ ಕಲ್ಕತ್ತ ಹೈಕೋರ್ಟ್ ತೀರ್ಪಿನ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ.
ಇಂತಹ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಸಮಯ ನೀಡದೆ, ಸಿಬ್ಬಂದಿಯನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಿದೆ. ಇದರಿಂದ ವ್ಯವಸ್ಥೆಯು ಸ್ತಬ್ಧವಾಗಿದೆ ಎಂದು ಅರ್ಜಿಯಲ್ಲಿ ರಾಜ್ಯ ಸರ್ಕಾರ ಉಲ್ಲೇಖಿಸಿದೆ.
ಶಾಲಾ ಸೇವಾ ಪ್ರಾಧಿಕಾರ (ಎಸ್ಎಸ್ಸಿ) ಆಯ್ಕೆ ಪರೀಕ್ಷೆ ಮೂಲಕ 2016ರಲ್ಲಿ ನಡೆಸಿದ್ದ 25,753 ಭೋದಕ ಹಾಗೂ ಭೋದಕೇತರ ಸಿಬ್ಬಂದಿಯ ನೇಮಕವನ್ನು ಸೋಮವಾರ ಕಲ್ಕತ್ತ ಹೈಕೋರ್ಟ್ ರದ್ದು ಮಾಡಿತ್ತು.ಸರ್ಕಾರಿ, ಅನುದಾನಿತ ಶಾಲೆಗಳ ಶಿಕ್ಷಕ ಹುದ್ದೆಗಳ ಭರ್ತಿಗೆ ನಡೆಸಿದ್ದ ಈ ನೇಮಕಾತಿ ಪ್ರಕ್ರಿಯೆಯನ್ನು ಅಸಿಂಧು ಎಂದು ಹೇಳಿದ್ದ ಕೋರ್ಟ್, ಈ ಹುದ್ದೆಗಳ ಭರ್ತಿಗಾಗಿ ಮತ್ತೆ ಪ್ರಕ್ರಿಯೆ ಆರಂಭಿಸಬೇಕು ಎಂದೂ ಎಸ್ಎಸ್ಸಿಗೆ ಆದೇಶಿಸಿತ್ತು.
ಅಲ್ಲದೆ, ಈ ಹುದ್ದೆಗಳಿಗೆ ನೇಮಕವಾಗಿದ್ದವರು ಇದುವರೆಗೆ ಪಡೆದಿರುವ ವೇತನದ ಮೊತ್ತವನ್ನು ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದೂ ಆದೇಶದಲ್ಲಿ ಹೇಳಿತ್ತು.