ಹೊಸದಿಗಂತ ವರದಿ ಮಂಡ್ಯ:
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ 10 ಮೈಲಿಕಲ್ಲಿನ ಬಳಿ ನಡೆದಿದೆ. ಪಾಂಡವಪುರ ಪಟ್ಟಣ ಪೋಲಿಸ್ ಠಾಣೆಯ ಪಿಐ ಪ್ರಭಾಕರ್, ಸಿಬ್ಬಂದಿ ಹೇಮಂತ್ ಗಾಯಗೊಂಡಿದ್ದಾರೆ. ಮಳವಳ್ಳಿಯಿಂದ ಮದ್ದೂರು ಕಡೆಗೆ ಪ್ರಯಾಣ ಮಾಡುವ ವೇಳೆ ಮಳವಳ್ಳಿ-ಮದ್ದೂರು ಹೆದ್ದಾರಿಯ 10ಮೈಲಿಕಲ್ಲಿನ ಬಳಿ ಕಾರು ನಿಯಂತ್ರಣ ತಪ್ಪಿ ಸುಮಾರು 15 ಅಡಿ ಅಳದ ಕಾಲುವೆಗೆ ಉರುಳಿ ಬಿದ್ದಿದೆ ಘಟನೆಯಲ್ಲಿ ಇಬ್ಬರಿಗೂ ಕೈ ಕಾಲು ಮುರಿದಿದೆ ಎನ್ನಲಾಗಿದೆ.
ಕಾರು ಸಿನಿಮೀಯ ಸ್ಟೈಲ್ನಲ್ಲಿ ಕಾಲುವೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.