ಹೊಸದಿಗಂತ ವರದಿ ಶಿವಮೊಗ್ಗ:
ಡಾ.ಹೆಡ್ಗೆವಾರ್ ಕುರಿತು ಪಠ್ಯದಲ್ಲಿ ಅಳವಡಿಸುತ್ತಿದ್ದಂತೆ ಕೆಲವರಿಗೆ ಉರಿ ಬಿದ್ದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ಪಠ್ಯದಲ್ಲಿ ಸೇರಿಸಿದ್ದೆಲ್ಲಾ ಸರಿ ಇತ್ತು. ಈಗ ದೇಶಪ್ರೇಮಿ ಹೆಡ್ಗೆವಾರ್ ವಿಷಯ ಸೇರ್ಪಡೆ ಆಗುತ್ತಿದ್ದಂತೆ ಕೆಲವರಿಗೆ ಉರಿ ಬಿದ್ದಿದೆ ಎಂದರು.
ರಾಷ್ಟ್ರಪ್ರೇಮಿಗಳ ವಿಷಯವನ್ನು ಪಠ್ಯದಲ್ಲಿ ಸೇರ್ಪಡೆ ಮಾಡಿದರೆ ತಪ್ಪೇನು? ಅವರೇನು ದೇಶದ್ರೋಹಿಯೇ? 1925 ರಲ್ಲಿ ಹೆಡ್ಗೆವಾರ್ ಅವರು ಸಂಘ ಸ್ಥಾಪನೆ ಮಾಡಿದ್ದರಿಂದಲೇ ಇಂದು ದೇಶ ಗಟ್ಟಿಯಾಗಿ ಉಳಿದುಕೊಂಡಿದೆ. ದೇಶ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೇ ಕೆಲವರು ಉರಿಸಿಕೊಂಡಿದ್ದಾರೆ. ಅವರು ಉರಿದು ಉರಿದು ಭಸ್ಮವಾಗಿ ಹೋಗುತ್ತಾರೆ ಎಂದರು.