ಹೊಸದಿಗಂತ ವರದಿ, ಬೆಂಗಳೂರು:
ಕಳೆದ ಎರಡು ದಿನಗಳ ಹಿಂದೆ ಕೆ. ಆರ್.ಪುರದ ಜಸ್ಟೀಸ್ ಭೀಮಯ್ಯ ಲೇಔಟ್ನಲ್ಲಿ ಹೆತ್ತ ಮಗನಿಂದ ತಾಯಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಮಹತ್ತರ ತಿರುವು ಸಿಕಿದ್ದು, ಆರೋಪಿ ಅಪ್ರಾಪ್ತ ಮಗನನ್ನು ಬಂಧಿಸಿರುವ ಪೊಲೀಸರು ತನಿಖೆ ವೇಳೆ ತಂದೆ ಚಂದ್ರಪ್ಪ ಕೂಡ ಇದರಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ತಿಳಿದಿದೆ.
ಕೆ. ಆರ್.ಪುರದ ಭೀಮಯ್ಯ ಲೇಔಟ್ ನಿವಾಸಿ ನೇತ್ರಾ (40) ಅವರ ಜತೆಗೆ ಹದಿನೇಳು ವರ್ಷದ ಅಪ್ರಾಪ್ತ ಮಗ ಬೆಳಗಿನ ತಿಂಡಿ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ್ದ. ನಂತರ ಮಾತಿಗೆ ಮಾತು ಬೆಳೆದಿದೆ. ಬಳಿಕ ನೇತ್ರಾ, ಕೋಪದಿಂದ ನೀನು ನನ್ನ ಮಗ ಅಲ್ಲ ನಾನು ನಿನ್ನತಾಯಿ ಅಲ್ಲ, ನಿನಗೆ ಊಟ ಹಾಕುವುದಿಲ್ಲ ಎಂದು ನಿಂದಿಸಿದ್ದಾಳೆ. ಇದಕ್ಕೆ ಸಿಟ್ಟಿಗೆದ್ದ ಮಗ, ತಾಯಿಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿ, ಪೊಲೀಸರ ಬಳಿ ಶರಣಾಗಿದ್ದಾನೆ. ಬಳಿಕ ತನಿಖೆ ಕೈಗೊಂಡ ಪೊಲೀಸರು, ಕೃತ್ಯದಲ್ಲಿ ಬಳಸಿದ್ದ ಕಬ್ಬಿಣದ ರಾಡ್ನ ಪರಿಶೀಲನೆ ವೇಳೆ ಎರಡು ವಿಭಿನ್ನ ಬೆರಳಚ್ಚು ಪತ್ತೆಯಾಗಿದೆ. ಅನುಮಾನಗೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ರಾಡನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದಾಗ ಅದರ ಮೇಲೆ ಪತ್ತೆಯಾಗಿರುವುದು ಮಗ ಮತ್ತು ತಂದೆಯ ಬೆರಳಚ್ಚು ಎಂಬುದು ತಿಳಿದಿದೆ. ಆದ್ದರಿಂದ ಆರೋಪಿ ಚಂದ್ರಪ್ಪನನ್ನು ಕೆ. ಆರ್.ಪುರ ಠಾಣೆ ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಪುರುಷನ ಸಂಬಂಧಕ್ಕೆ ಬೇಸತ್ತ ಪತಿ
ಪೊಲೀಸರ ವಿಚಾರಣೆ ವೇಳೆ ಆರೋಪಿ ಚಂದ್ರಪ್ಪ, ತನ್ನ ಪತ್ನಿಗೆ ಪರಪುರುಷನೊಂದಿಗೆ ಸಂಬಂಧದ ಜತೆಗೆ ಮದ್ಯಪಾನದ ಅಭ್ಯಾಸವೂ ಇತ್ತು. ಒಮ್ಮೊಮ್ಮೆ ಎರಡೂರು ದಿನಗಳಾದರೂ ಮನೆಗೆ ಬರುತ್ತಿರಲಿಲ್ಲ. ನಾವು ಊಟವಿಲ್ಲದೆ ಉಪವಾಸ ಇರುತ್ತಿದ್ದವು. ಇದರ ಬಗ್ಗೆ ವಿಚಾರ ಮಾಡಿದರೆ ನಮ್ಮನ್ನು ಅವಾಚ್ಯ ನುಡಿಗಳಿಂದ ನಿಂದಿಸುತ್ತಿದ್ದಳು. ಇದರಿಂದ ಬೇಸತ್ತು ಅನಿವಾರ್ಯತೆಯಿಂದ ಸಂಚುರೂಪಿಸಿ ಮಗನೊಂದಿಗೆ ಸೇರಿ ಹತ್ಯೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಮಾಹಿತಿ ನೀಡಿದರು.
ತಂದೆಯನ್ನು ಉಳಿಸಿದ್ದ ಮಗ?:
ತಾಯಿ ನೇತ್ರಾಳನ್ನು ಕೊಲೆ ಮಾಡಿರುವ ಮಗ, ತನ್ನ ತಂದೆಯ ಬಗ್ಗೆ ಯೋಚಿಸಿ, ತಂದೆ ಜೈಲಿಗೆ ಹೋಗುವುದು ಬೇಡವೆಂದು ನಿರ್ದರಿಸಿದ್ದ. ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಮತ್ತು ಜೈಲಿನಲ್ಲೇ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ತಾನು ಜೈಲಿಗೆ ಹೋಗಿ ವಾಪಸ್ಸಾಗುವಷ್ಟರಲ್ಲಿ ಚೆನ್ನಾಗಿ ದುಡ್ಡು ಮಾಡುವಂತೆ ತಂದೆಯ ಮನವೊಲಿಸಿ, ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ತನಿಖೆಯಲ್ಲಿ ತಂದೆ-ಮಗನ ಪಾತ್ರ ಬಯಲಾಗಿದೆ ಎಂದು ಹೇಳಿದರು.