ಹೊಸದಿಗಂತ ವರದಿ,ಮೈಸೂರು:
ಭಗವದ್ಗೀತೆ, ಕುರಾನ್, ಬೈಬಲ್ಗಿಂತ ಡಾ.ಬಿ.ಆರ್ .ಅಂಬೇಡ್ಕರ್ ಕೊಟ್ಟ ಸಂವಿಧಾನವೇ ನಮ್ಮ ಧರ್ಮವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನುದ್ದೆಶಿಸಿ ಮಾತನಾಡಿದ ಅವರು, ದೇವರ ಸಮಾನರಾದ ಮಕ್ಕಳ ಮನಸ್ಸಿಗೆ ವಿಷ ತುಂಬದೇ ಸಂವಿಧಾನ ಪೀಠಿಕೆ ಓದುವಂತೆ ಮಾಡಿದ್ದು ನಮ ಸರ್ಕಾರದ ಸಾಧನೆಯಾಗಿದೆ. ಬಿಜೆಪಿಯವರಿಗೆ ಮಕ್ಕಳಲ್ಲಿ ಜಾತಿ, ಕೋಮುವಾದಿ ವಿಷವನ್ನು ತುಂಬುವ ಕೆಟ್ಟ ಚಾಳಿ. ನಮಗೇ ಗುಣಮಟ್ಟದ ಶಿಕ್ಷಣ ಕೊಡುವ ಚಾಳಿ ಎಂದರು.
ಇವತ್ತು ರಾಜ್ಯದ 1 ಕೋಟಿ 20 ಲಕ್ಷ ಮಕ್ಕಳು ಪೀಠಿಕೆ ಓದುತ್ತಿದ್ದಾರೆ. ಬಾಯಿ ಪಾಠ ಮಾಡಿ, ಸಂವಿಧಾನ ಪೀಠೀಕೆ ಹೇಳುವುದನ್ನು ಕೇಳುವಾಗ ಹೆಮೆ ಅನಿಸುತ್ತದೆ ಎಂದು ನುಡಿದರು.
ಅಧಿಕಾರಕ್ಕೆ ಬಂದ 7 ತಿಂಗಳ ಒಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿ, ರಾಜ್ಯದ ಮತದಾರರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ರಾಜ್ಯದ ಶೇ. 99 ಹೆಣ್ಣು ಮಕ್ಕಳು ಗೃಹಲಕ್ಷ್ಮಿ ಹಣ ಪಡೆದಿದ್ದಾರೆ. ಶೇ. 99 ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸುಳ್ಳಿಗೆ ಬೆಲೆ ಇಲ್ಲ. ಅವರಿಗೆ ಮಾನ ಮಾರ್ಯದಿಯೂ ಇಲ್ಲ. ನರೇಂದ್ರ ಮೋದಿ ಅವರು ಮಕ್ಕಳಿಗೆ ಕೊಡುವ ಪಾಲನ್ನು ಕಡಿತ ಮಾಡಿದ್ದಾರೆ. ಬಿಜೆಪಿಯವರಿಗೆ ಉತ್ತರ ಕೊಡುವುದು ಬೇಡ. ನಮ ಸಾಧನೆಯನ್ನು ಮತದಾರರ ಮನೆ ಮನೆಗೆ ತಲುಪಿಸಿ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ, ಕಾರಾವಾರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಮಂಗಳೂರು ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ. ಮೈಸೂರಿನಲ್ಲೂ ಮಾರಿಹಬ್ಬ ಮಾಡಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಹಾಗಂತ ನಾವು ಎಡುವುದು ಬೇಡ. ಒಮ್ಮೆ ಎಡವಿದರೆ ಆ ತಪುö್ಪ ಸರಿಮಾಡಲು 5 ವರ್ಷ ಕಾಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ ವಿಜಯ್ಕುಮಾರ್ ಮಾತನಾಡಿ, ಮಧುಬಂಗಾರಪ್ಪ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕವೇ ಪಠ್ಯಪುಸ್ತಕ ಬದಲಾವಣೆಗೆ ಸಹಿ ಮಾಡಿದರು. ಶಿಕ್ಷಕರ ಕೊರತೆಯನ್ನು ಅರಿತು 20 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದಾರೆ ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಎಂ.ಶಿವಣ್ಣ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮ ಣ , ಮುಖಂಡರಾದ ನಟರಾಜ್, ಅನಂತ್, ಮೊಹಮದ್, ಪುಷ್ಪಲತಾ ಚಿಕ್ಕಣ್ಣ, ಲತಾಸಿದ್ದಶೆಟ್ಟಿ, ಮೋದಾಮಣಿ, ಮಾರುತಿ, ಈಶ್ವರ್ ಚಕ್ಕಡಿ, ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.